ಕಾಸರಗೋಡು: ಮಂಜೇಶ್ವರ ಪಾವೂರಿನ ಬಾಲಕಿಗೆ ಆಕೆಯ ಸಹೋದರ ಮತ್ತು ಅವನ ಗೆಳೆಯರು ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ತನಿಖೆ ಸಂದರ್ಭದಲ್ಲಿ ಇನ್ನೊಬ್ಬಳು ಸಹೋದರಿಯ ಮೇಲೂ ಇದೇ ರೀತಿಯ ಕೃತ್ಯ ನಡೆದಿರುವುದು ಬಯಲಾಗಿದೆ. ಇಡೀ ಪ್ರಕರಣ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.
ಆರೋಪಿ ಅಬ್ದುಲ್ ಆಸೀಸ್ ತನ್ನ ಸಹೋದರಿ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಲೈಂಗಿಕ ದಂಧೆಗೆ ಬಳಸಿರುವ ಪ್ರಕರಣದ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದ್ದು, ಇದರ ತನಿಖೆ ನಡೆಸುತ್ತಿರುವ ಪ್ರತ್ಯೇಕ ಪೊಲೀಸ್ ತಂಡ ಬುಧವಾರ ಈ ಆಘಾತಕರ ಮಾಹಿತಿ ಹೊರಹಾಕಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ ತನ್ನ ಸಹೋದರಿ (ಪ್ಲಸ್ವನ್ ತರಗತಿಯ ವಿದ್ಯಾರ್ಥಿನಿ)ಗೂ ಇದೇ ಬಗೆಯಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ದೌರ್ಜನ್ಯಕ್ಕೆ ಒಳಗಾದ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಇದು ರುಜುವಾತಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಕಳೆದು ರಜಾದಿನಗಳನ್ನು ಮನೆಯಲ್ಲಿ ಕಳೆಯುತ್ತಿದ್ದಾಗ ಪ್ರವಾಸದ ನೆಪದಲ್ಲಿ ಸಹೋದರ ಮತ್ತು ತೊಕ್ಕೊಟ್ಟು ನಿವಾಸಿ ಸುಹರಾ ಸೇರಿ ಮಂಗಳೂರಿಗೆ ಕರೆದೊಯ್ದು ಲೈಂಗಿಕ ದಂಧೆಗೆ ಬಳಸಿದ್ದಾರೆ ಎನ್ನಲಾಗಿದೆ. ಮಚ್ಚಂಪಾಡಿಯ ಉದ್ಯಮಿ ಅಬೂಬಕ್ಕರ್ ದೌರ್ಜನ್ಯ ನಡೆಸಿದ್ದಾನೆ. ಜೂನ್ ತಿಂಗಳಲ್ಲಿ ಸಹೋದರ ಮತ್ತವನ ಗೆಳೆಯ ಅಶ್ರಫ್ ಚಿಕ್ಕಮಗಳೂರಿಗೆ ಕೊಂಡೊಯ್ದು ಕಿರುಕುಳ ನೀಡಿದ್ದರು. ಈ ಪ್ರಕರಣದಲ್ಲಿ ಬಾಲಕಿಯ ಹೇಳಿಕೆ ಆಧರಿಸಿ ಅಬ್ದುಲ್ ಅಸೀಸ್, ಸುಹರಾ ಮತ್ತು ಅಬೂಬಕ್ಕರ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಸುಹರಾ ಮತ್ತು ಅಬೂಬಕ್ಕರ್ ಮನೆಗೂ ಪೊಲೀಸರು ದಾಳಿ ನಡೆಸಿದರು. ಆದರೆ ಅಬೂಬಕ್ಕರ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.