ಬೆಳಗಾವಿ: ಬೆಳಗಾವಿ ಸ್ವಿಮ್ಮರ್ಸ್ ಕ್ಲಬ್ನ ಸದಸ್ಯ ಕಲ್ಲಪ್ಪ ಪಾಟೀಲ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯರ ಅಕ್ವಾಂಟಿಕ್ ಚಾಂಪಿಯನ್ಷಿಪ್ನಲ್ಲಿ 3 ಚಿನ್ನದ ಪದಕ, 2 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದು ಗಮನ ಸೆಳೆದಿದ್ದಾರೆ.
ಬೆಳಗಾವಿ ಸ್ವಿಮ್ಮರ್ಸ್ ಕ್ಲಬ್ನ ಸದಸ್ಯರಾದ ಲಕ್ಷ್ಮಣ ಕುಂಬಾರ 1 ಚಿನ್ನ, 3 ಬೆಳ್ಳಿ ಪದಕ ಹಾಗೂ ಬಲವಂತ ಪತ್ತಾರ 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದಿದ್ದಾರೆ. ಅಕ್ಟೋಬರ್ 25ರಿಂದ ರಾಜಕೋಟ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಹಿರಿಯರ ಅಕ್ವೆಂಟಿಕ್ ಚಾಂಪಿಯನ್ಷಿಪ್ನಲ್ಲಿ ಈ ಮೂವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕಲ್ಲಪ್ಪ ಪಾಟೀಲ ಅವರು 50ರಿಂದ 55 ವರ್ಷದೊಳಗಿನ 400 ಮೀ. ಫ್ರೀ ಸ್ಟೈಲ್, 200 ಮೀ. ಫ್ರೀ ಸ್ಟೈಲ್ ಹಾಗೂ 50 ಮೀ. ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. 100 ಮೀ. ಬ್ಯಾಕ್ ಸ್ಟ್ರೋಕ್ ಹಾಗೂ 4 x 50 ಮೀಟರ್ ಮೆಡ್ಲಿ ರಿಲೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮತ್ತು 4 x 50 ಮೀಟರ್ ಫ್ರೀ ಸ್ಟೈಲ್ನಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ.
ಲಕ್ಷ್ಮಣ ಕುಂಬಾರ ಅವರು 65ರಿಂದ 70 ವರ್ಷದೊಳಗಿನ 50 ಮೀ. ಬ್ಯಾಕ್ ಸ್ಟ್ರೋಕ್ನಲ್ಲಿ ಚಿನ್ನದ ಪದಕ, 50 ಮೀ. ಬ್ರೆಸ್ಟ್ ಸ್ಟ್ರೋಕ್, 100 ಮೀ. ಬ್ರೆಸ್ಟ್ ಸ್ಟ್ರೋಕ್ ಹಾಗೂ 50 ಮೀ. ಬಟರ್ಫ್ಲೈನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಬಲವಂತ ಪತ್ತಾರ ಅವರು 60ರಿಂದ 65 ವರ್ಷದೊಳಗಿನ 100 ಮೀ. ಬ್ಯಾಕ್ ಸ್ಟ್ರೋಕ್ನಲ್ಲಿ ಬೆಳ್ಳಿ ಹಾಗೂ 50 ಮೀ. ಬ್ಯಾಕ್ ಸ್ಟ್ರೋಕ್ನಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಲಕ್ಷ್ಮಣ ಕಂಬಾರ ಅವರು ರಾಷ್ಟ್ರೀಯ ಮಿಲಿಟರಿ ಶಾಲೆಯ ನಿವೃತ್ತ ಅಧಿಕಾರಿಯಾಗಿದ್ದು, ಸದ್ಯ ಲಿಂಗಾಯತ ಸಂಘಟನೆ ಮತ್ತು ಹಿರಿಯ ನಾಗರಿಕರ ಸಂಘದ ಸದಸ್ಯರಾಗಿದ್ದಾರೆ. ಕಳೆದ 30 ವರ್ಷಗಳಿಂದ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಕಲ್ಲಪ್ಪ ಪಾಟೀಲ ಅವರು ರೋಟರಿ ಕಾರ್ಪೊರೇಶನ್ ಈಜುಗೊಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಲವಂತ ಪತ್ತಾರ ಅವರು ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿಯಾಗಿದ್ದಾರೆ.
ಈ ಮೂವರು ಈಜುಗಾರರು ರೋಟರಿ ಕಾರ್ಪೊರೇಶನ್ ಸ್ಪೋರ್ಟ್ಸ್ ಅಕಾಡೆಮಿ ಈಜುಗೊಳದಲ್ಲಿ ಉಮೇಶ ಕಲಘಟಗಿ ಹಾಗೂ ಸುಧೀರ ಕುಸಾನೆ ಅವರಿಂದ ತರಬೇತಿ ಪಡೆದುಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.