ಕೃಷ್ಣರಾಜಪುರ: ಇಲ್ಲಿಗೆ ಸಮೀಪದ ವಿಜನಾಪುರ ಕುಮರನ್ ಶಾಲಾ ಆವರಣದಲ್ಲಿ ಬಿಬಿಎಂಪಿ ಸದಸ್ಯ ಭೈರತಿ ಎ.ಬಸವರಾಜ್ ಅವರು ಶಾಲೆಯ ಎಲ್ಲ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿಗಾಗಿ ಚೆಕ್ ವಿತರಿಸಿದರು.
ಆನಂತರ ಮಾತನಾಡಿದ ಅವರು, `ಶಿಕ್ಷಣದಿಂದ ಮಾತ್ರ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಶಿಕ್ಷಕರು ಕೂಡ ಮಕ್ಕಳ ಪ್ರತಿಭೆ ಗುರುತಿಸಿ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು~ ಎಂದು ಕರೆ ನೀಡಿದರು.
ಪ್ರತಿ ತರಗತಿಯಲ್ಲಿ ಬಡ ಕುಟುಂಬದಿಂದ ಬಂದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10ನೇ ತರಗತಿವರೆಗೆ ಶೈಕ್ಷಣಿಕ ನೆರವು ನೀಡುವುದಾಗಿಯೂ ಭರವಸೆ ನೀಡಿದರು.
ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಅಮಾನುಲ್ಲ ಮಾತನಾಡಿದರು. ಶಾಲೆಯ ಕಾರ್ಯದರ್ಶಿ ಪಾಂಡಿಯನ್, ಮುಖ್ಯ ಶಿಕ್ಷಕಿ ಕಲಾನಿಧಿ, ಸಾಮಾಜಿಕ ಕಾರ್ಯಕರ್ತರಾದ ಮುನಿರಾಜು, ಮುನಿಯಪ್ಪ, ಸುರೇಶ್ನಾಯ್ಡು, ಜೆ.ಸಿ.ಪ್ರಕಾಶ್ ಉಪಸ್ಥಿತರಿದ್ದರು.