ಚಿಕ್ಕಮಗಳೂರು: ಪ್ರತಿಯೊಬ್ಬ ವ್ಯಕ್ತಿಯೂ ಮನಸ್ಸು ಮಾಡಿದರೆ ಸಮಾಜವನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಬಹುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಸ್ತೆ ಬದಿ ವ್ಯಾಪಾರಸ್ಥರ ಪತ್ತಿನ ವಿವಿಧೋದ್ದೆೀಶ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಘದಲ್ಲಿ ಈಗಾಗಲೆ ಒಂದು ಲಕ್ಷ ಹಣ ಹಾಗೂ 200 ಷೇರುದಾರರು ಇದ್ದಾರೆ. ಸಂಘದ ನಿವೇಶನಕ್ಕೆ ಒಂದು ಲಕ್ಷ ರೂ. ನೆರವು ನೀಡುವ ಜತೆಗೆ ಡಿಸಿಸಿ ಬ್ಯಾಂಕ್ ಮೂಲಕ ಹಣಕಾಸು ಸಹಾಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ರಸ್ತೆ ಬದಿ ವ್ಯಾಪಾರಸ್ಥರಿಗೆ ಸಂಘದ ವತಿಯಿಂದ ವ್ಯಾಪಾರಕ್ಕಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಹಾಗೂ ತಳ್ಳು ಗಾಡಿಗಳು ತೆಗೆದುಕೊಳ್ಳುವುದಕ್ಕೂ ಸಾಲ ನೀಡಲಾಗುತ್ತದೆ ಎಂದು ರಸ್ತೆಬದಿ ಬೀದಿ ವ್ಯಾಪಾರಸ್ಥರ ಪತ್ತಿನ ವಿವಿಧೋದ್ದೇಶ ಸಹಕಾರ ಸಂಘಗಳ ಅಧ್ಯಕ್ಷ ಬಿ.ಎನ್.ಮಂಜುನಾಥ್ ತಿಳಿಸಿದರು.
ಜಯ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಅನೀಲ್, ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಅಮ್ಜದ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ಗುರುಶಾಂತಪ್ಪ, ನಗರಸಭೆ ಸದಸ್ಯ ಶ್ರೀಧರ್ ಉರಾಳ್, ಪ್ರೇಮ್ಕುಮಾರ್, ತೆರಿಗೆ ಸಲಹೆಗಾರರಾದ ಪ್ರಕಾಶ್ ಅರಸ್, ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿದಂಬರ್ ಮಾತನಾಡಿದರು.
ಸಂಘದ ವತಿಯಿಂದ ಅಂಗವಿಕಲರಾಗಿ ಸ್ವಾವಲಂಬಿ ಜೀವನ ನಡೆಸುತ್ತಿರುವ ದೇವರಾಜ್ ಇತರರನ್ನು ಸನ್ಮಾನಿಸಲಾಯಿತು. ಕುಮಾರ್, ಹರೀಶ್, ಶಿವಾಜಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.