ನವದೆಹಲಿ (ಪಿಟಿಐ): ಹೆಚ್ಚುತ್ತಿರುವ ಚಳಿಗಾಳಿಗೆ ಉತ್ತರ ಭಾರತ ತತ್ತರಿಸಿದ್ದು, ಈವರೆಗೆ ಏಳು ಜನರು ಬಲಿಯಾಗಿದ್ದಾರೆ.
ರಾಜಧಾನಿ ಸೇರಿದಂತೆ ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ದಟ್ಟವಾದ ಮಂಜಿನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ದೆಹಲಿಯಲ್ಲಿ ಗರಿಷ್ಠ ತಾಪಮಾನ 16.2 ಡಿಗ್ರಿ ಸೆಲ್ಸಿಯಸ್ಗೆ ಮತ್ತು ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಗರಿಷ್ಠ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಏಳು ಡಿಗ್ರಿ ಸೆಲ್ಸಿಯಸ್ನಷ್ಟು ಮತ್ತು ಕನಿಷ್ಠ ತಾಪಮಾನ ಒಂದು ಡಿಗ್ರಿ ಕುಸಿತ ಕಂಡಿದೆ.
ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದ ವಿವಿಧೆಡೆ ಚಳಿಗಾಳಿಯಿಂದಾಗಿ ಏಳು ಜನರು ಸಾವನ್ನಪ್ಪಿದ್ದಾರೆ. ರಾತ್ರಿಯ ಚಳಿಗೆ ಜನತೆ ಬೆಚ್ಚಿ ಬಿದ್ದಿದ್ದು, ಬೆಳಿಗ್ಗೆ ದಟ್ಟವಾದ ಮಂಜು ಕವಿದ ವಾತಾವರಣದಲ್ಲಿ ಸೂರ್ಯನ ಕಿರಣಗಳು ಅಪರೂಪವಾಗಿವೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಪಂಜಾಬ್, ಹರಿಯಾಣ, ಚಂಡೀಗಡದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರೈಲು, ವಿಮಾನ ಮತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ದಟ್ಟ ಮಂಜು ಕವಿದ ಕಾರಣ ರಸ್ತೆಗಳು ಗೋಚರಿಸದೆ ಕೆಲವು ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ.