ಸಾಗರ: ಶಿಕ್ಷಣ ಕ್ಷೇತ್ರ ಉದ್ಯಮದ ಸ್ವರೂಪ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೆ.ಎಚ್. ಶ್ರೀನಿವಾಸ್ ಹೇಳಿದರು.
ಎಂಡಿಎಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದ ಅವರು, ಗುಣಾತ್ಮಕ ಶಿಕ್ಷಣ ನೀಡುವುದೇ ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಬೇಕು ಹೊರತು ಹೆಚ್ಚು ಕಟ್ಟಡಗಳನ್ನು ನಿರ್ಮಿಸಿ ಹಣ ಮಾಡುವುದಲ್ಲ ಎಂದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ತನ್ನ ಆರಂಭದ ದಿನಗಳಿಂದಲೂ ಯಾವುದೇ ಶಿಕ್ಷಣ ಸಂಸ್ಥೆಯೊಂದಿಗೆ ಸ್ಪರ್ಧೆ ನಡೆಸುವ ಮನೋಭಾವದಿಂದ ಹೊರತಾಗಿದೆ. ಪರೀಕ್ಷೆಗೆ ಮೀರಿದ ಕಲಿಕೆಯ ಮೂಲಕ ಹೊಸ ವ್ಯಕ್ತಿತ್ವ ರೂಪಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂತರ್ಜಾಲ ಕೇಂದ್ರವನ್ನು ಶ್ರೀನಿವಾಸ್ ಉದ್ಘಾಟಿಸಿದರು. ಹೆಚ್ಚು ಅಂಕ ಗಳಿಸಿದ ಶಾಹಿನಾ, ಸುಪ್ರಿಯಾ, ಸೌಮ್ಯಾ, ದೀಪ್ತಿ ಅವರನ್ನು ಪುರಸ್ಕರಿಸಲಾಯಿತು.
ಎಂಡಿಎಫ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಕೆ.ಎನ್. ಬೈಲಕೇರಿ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ವಿ. ಮೋಹನ್, ಸಹ ಕಾರ್ಯದರ್ಶಿ ರವೀಂದ್ರ ಸಭಾಹಿತ್, ಉಪನ್ಯಾಸಕ ಎಸ್.ಎನ್. ರವೀಂದ್ರ ಹಾಜರಿದ್ದರು.
ರೇಣುಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಂ. ರಂಗನಾಥ್ ಸ್ವಾಗತಿಸಿದರು. ಎ.ಎಸ್. ವಿನಾಯಕ ಪ್ರಾಸ್ತಾವಿಕ ಮಾತನಾಡಿದರು. ಶಶಾಂಕ ಹೆಗಡೆ ವಂದಿಸಿದರು. ಎಂ. ಹಾಲೇಶ್ ಕಾರ್ಯಕ್ರಮ ನಿರೂಪಿಸಿದರು.