ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಪ್ರಕೃತಿ ಚಿಕತ್ಸೆ ಪಡೆದುಕೊಳ್ಳುವ ಸಲುವಾಗಿ ಗುರುವಾರ ನಗರದ ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಆಸ್ಪತ್ರೆಗೆ ಆಗಮಿಸಿದರು.
ಆಸ್ಪತ್ರೆಯ ಮುಂದೆ ಸೇರಿದ್ದ ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ಸದಸ್ಯರು ಮತ್ತು ಅಭಿಮಾನಿಗಳು ಅಣ್ಣಾ ಪರ ಘೋಷಣೆ ಕೂಗಿದರು. ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರು ಅಣ್ಣಾ ಜತೆ ಆಗಮಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ , `ದೇಹದ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜಿಂದಾಲ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆರೋಗ್ಯ ಸ್ಥಿರವಾದ ನಂತರ ಮತ್ತೆ ಭ್ರಷ್ಟಾಚಾರದ ವಿರುದ್ದ ಹೋರಾಟ ಮುಂದುವರಿಸುತ್ತೇನೆ~ ಎಂದು ಅವರು ತಿಳಿಸಿದರು.
`ಭ್ರಷ್ಟಾಚಾರ ವಿರುದ್ದದ ಹೋರಾಟವು ಅಣ್ಣಾ ಮತ್ತು ಕೇಜ್ರಿವಾಲ್ರ ಹಕ್ಕು ಮಾತ್ರವಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾಗಲು ಎರಡರಿಂದ ಹತ್ತು ವರ್ಷಗಳ ಕಾಲಾವಕಾಶ ಬೇಕಾಗಬಹುದು. ಭ್ರಷ್ಟಾಚಾರವನ್ನು ಬೆಂಬಲಿಸಿದರೆ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರು ಅವರ ತ್ಯಾಗಕ್ಕೆ ಅವಮಾನ ಮಾಡಿದಂತಾಗುತ್ತದೆ~ ಎಂದು ಹೇಳಿದರು.
`ನೈತಿಕತೆಯ ತಳಹದಿಯ ಮೇಲೆ ನಿಂತಿರುವ ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಿ. ದೇಶಕ್ಕಾಗಿ ಯಾವುದೇ ತ್ಯಾಗ ಮಾಡಲು ಸಿದ್ಧರಾಗಿರಿ~ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸೀತಾರಾಂ ಜಿಂದಾಲ್, `ಅಣ್ಣಾ ಅವರ ದೇಹದ ಪರಿಸ್ಥಿತಿಗೆ ಅನುಗುಣವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು 8 ರಿಂದ 10 ದಿನಗಳ ಕಾಲ ನೀಡಲಾಗುವುದು~ ಎಂದು ತಿಳಿಸಿದ ಅವರು, `ಲಂಚಗುಳಿತನವು ಬಡತನ, ಬೆಲೆ ಏರಿಕೆ, ಅಪೌಷ್ಠಿಕ ಆಹಾರ, ಅನಕ್ಷರತೆಯಂತಹ ಹತ್ತು ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದು, ಇದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಹಜಾರೆ ಅವರ ಹೋರಾಟ ಸೂಕ್ತವಾಗಿದೆ~ ಎಂದು ಹೇಳಿದರು.