ಜಗಳೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೂ 20 ಲಕ್ಷ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲಾಗಿದೆ.
ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಯಾವುದೇ ಕಾಮಗಾರಿ ಕೈಗೊಳ್ಳದೇ, ಸೂಕ್ತ ದಾಖಲೆಗಳಿಲ್ಲದೇ, 20 ಲಕ್ಷ ಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ನಾಗರಾಜ್ ಹಾಗೂ ಕಾರ್ಯದರ್ಶಿ ಕೊಟ್ರೇಶ್ ಅವರು ಪಾವತಿ ಮಾಡಿಕೊಂಡಿದ್ದಾರೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಿ.ಎಂ. ಪ್ರಭುಸ್ವಾಮಿ ಅವರು ಇಲ್ಲಿನ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾಮಗಾರಿ ನಿರ್ವಹಿಸಿರುವ ಬಗ್ಗೆ ಎಂಜಿನಿಯರ್ ಅವರು ಅಳತೆ ಪುಸ್ತಕ ದಾಖಲಿಸಿಲ್ಲ. ನಗದು ಪುಸ್ತಕ, ಕೂಲಿ ಕಾರ್ಮಿಕರ ಪಟ್ಟಿ ಹಾಗೂ ಎಂಐಎಸ್ ಆಗಿಲ್ಲ. ಶೇ 40ರಷ್ಟು ಸಾಮಗ್ರಿ ಪೂರೈಕೆ ಹಣವನ್ನು ನೋಂದಾಯಿತ ಗುತ್ತಿಗೆದಾರರ ಬದಲು, ಬೇಕಾಬಿಟ್ಟಿಯಾಗಿ ವ್ಯಕ್ತಿಯೊಬ್ಬರ ಹೆಸರಿಗೆ ಚೆಕ್ ಮೂಲಕ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಇಒ ಪ್ರಭುಸ್ವಾಮಿ ಹಾಗೂ ತಾ.ಪಂ. ಅಧ್ಯಕ್ಷ ಬಿ.ಆರ್. ಅಂಜಿನಪ್ಪ ಅವರು ಕೆಲವು ದಿನಗಳ ಹಿಂದೆ ಪಂಚಾಯ್ತಿ ಕಚೇರಿಗೆ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ನಂತರ ಲೆಕ್ಕಪರಿಶೋಧಕರಿಂದ ಪರಿಶೀಲನೆ ಕಾರ್ಯ ಕೈಗೊಳ್ಳಲಾಗಿತ್ತು.