ನವದೆಹಲಿ (ಪಿಟಿಐ): ಹಾಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ 2ನೇ ಅವಧಿಗೆ ಮುಂದುವರೆಯುವ ಸಂಭಾವ್ಯದ ನಡುವೆಯೂ ಈ ಸಂಬಂಧ ನಡೆಯಬಹುದಾದ ಚುನಾವಣೆಗೆ ಅಭ್ಯರ್ಥಿ ಘೋಷಣೆಗೆ ಆಡಳಿತಾರೂಢ ಯುಪಿಎ ಇದೇ 14ರಂದು ಇಲ್ಲಿ ಸಭೆ ನಡೆಸಲಿದೆ.
ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರಿಗೆ ಈವರೆಗೆ ಬೆಂಬಲ ಸೂಚಿಸದ ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್ ಬಿಗಿ ನಿಲುವಿನ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ. ಸಭೆಗೆ ಹಾಜರಾಗಲು ರೈಲ್ವೆ ಸಚಿವ ಮುಕುಲ್ ರಾಯ್ ಅವರಿಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ.
ಪ್ರಣವ್ ಬೆಂಬಲಿಸುವ ಸಂಬಂಧ ಕಾಂಗ್ರೆಸ್-ಟಿಎಂಸಿ ಸಂಬಂಧ ಬಿರುಕುಬಿಟ್ಟ ತರುವಾಯ ಎರಡೂ ಪಕ್ಷಗಳ ಮುಖಂಡರು ಸಭೆ ಸೇರುತ್ತಿರುವುದು ಇದೇ ಮೊದಲು. ರಾಷ್ಟ್ರಪತಿ ಚುನಾವಣೆಗೆ 3 ದಿನ ಬಾಕಿ ಇರುವಾಗ ಬೆಂಬಲ ನೀಡುವ ಕುರಿತ ನಿರ್ಧಾರ ಪ್ರಕಟಿಸುವುದಾಗಿ ಟಿಎಂಸಿ ಹೇಳಿದ್ದರಿಂದ ಯುಪಿಎ ವಲಯದಲ್ಲಿ ಆತಂಕವುಂಟಾಗಿತ್ತು. ಇದೀಗ 14ರ ಯುಪಿಎ ಸಭೆಗೆ ಟಿಎಂಸಿ ಪ್ರತಿನಿಧಿ ಪಾಲ್ಗೊಳ್ಳುತ್ತಿರುವುದರಿಂದ ಈ ಆತಂಕ ದೂರವಾದಂತಾಗಿದೆ.