ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಸುತ್ತಮುತ್ತಲ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ಉಪನಗರ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದ್ದು, 8- 10 ತಿಂಗಳಲ್ಲಿ ಇದಕ್ಕೆ ಸ್ಪಷ್ಟ ರೂಪ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ತಿಳಿಸಿದರು.
ಬೆಂಗಳೂರು - ತುಮಕೂರು, ಬೆಂಗಳೂರು - ರಾಮನಗರ, ಬೆಂಗಳೂರು - ಮಾರಿಕುಪ್ಪಂ, ಬೆಂಗಳೂರು - ಮಾಲೂರು ಸೇರಿದಂತೆ ಐದು ಕಾರಿಡಾರ್ಗಳನ್ನು ಒಳಗೊಂಡ 440 ಕಿ.ಮೀ. ಮಾರ್ಗದ ಉಪನಗರ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದ್ದು, ಇದರ ಯೋಜನಾ ವೆಚ್ಚ ರೂ8759 ಕೋಟಿ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಒಟ್ಟು ಯೋಜನಾ ವೆಚ್ಚದ ಶೇ 67ರಷ್ಟನ್ನು ಕೇಂದ್ರ ಹಾಗೂ ಶೇ 33ರಷ್ಟನ್ನು ರಾಜ್ಯ ಭರಿಸಬೇಕು ಎಂಬ ಆಶಯ ಹೊಂದಲಾಗಿದೆ. ಕೇಂದ್ರದ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕ್ಲಷ್ಟರ್ ಅಭಿವೃದ್ಧಿ: ಹೂಡಿಕೆದಾರರಿಗೆ ಉತ್ತೇಜನ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಸುತ್ತಮುತ್ತ 8 ನಗರ ಕ್ಲಷ್ಟರ್ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ನೆಲಮಂಗಲ, ಮಾಗಡಿ, ಆನೇಕಲ್, ಬಿಡದಿ, ದಾಬಸ್ಪೇಟೆ, ಹಾರೋಹಳ್ಳಿ, ದೇವನಹಳ್ಳಿ ಹಾಗೂ ಹೊಸಕೋಟೆಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಮೇಲಿನ ಅವಲಂಬನೆ ಹೆಚ್ಚಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರು ಸುತ್ತಮುತ್ತ ಗುರುತಿಸಿರುವ 8 ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಬಂಡವಾಳ ಹೂಡಿಕೆದಾರರಿಗೆ ಅಗತ್ಯ ನೆರವು ನೀಡಲಾಗುವುದು ಎಂದರು.