ಹುಬ್ಬಳ್ಳಿ: ಉಳ್ಳಾಗಡ್ಡಿಗೆ ಹೆಚ್ಚಿನ ದರ ನೀಡಬೇಕೆಂದು ಆಗ್ರಹಿಸಿ ರೈತರು ಇಲ್ಲಿಯ ಎಪಿಎಂಸಿ ಎದುರಿನ ಹುಬ್ಬಳ್ಳಿ-ಧಾರವಾಡ ರಸ್ತೆಯನ್ನು ಬಂದ್ ಮಾಡಿ ಅರ್ಧ ಗಂಟೆ ಪ್ರತಿಭಟಿಸಿದ ಘಟನೆ ಸೋಮವಾರ ನಡೆಯಿತು.
ಕಳೆದೆರಡು ದಿನಗಳಿಂದ ಸರಿಯಾಗಿ ಬಿಸಿಲು ಬೀಳದೆ, ಸಣ್ಣಗೆ ಮಳೆಯಾಗುತ್ತಿರುವುದರಿಂದ ಆತಂಕಗೊಂಡ ರೈತರು ಸೋಮವಾರ 150 ಲೋಡ್ ಉಳ್ಳಾಗಡ್ಡಿಯನ್ನು ಎಪಿಎಂಸಿಗೆ ತಂದ ಪರಿಣಾಮ ದಿಢೀರ್ ದರ ಕುಸಿಯಿತು.
ಕ್ವಿಂಟಲ್ಗೆ ಕೇವಲ 300 ರೂಪಾಯಿ ಖರೀದಿ ನಡೆಯುವುದನ್ನು ಕಂಡು ಆಕ್ರೋಶಗೊಂಡ ರೈತರು ಪ್ರತಿಭಟನೆ ಆರಂಭಿಸಿದರು.
ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಸಂಧಾನ ನಡೆದು ಕ್ವಿಂಟಲ್ಗೆ ರೂ. 300ರಿಂದ 900ರವರೆಗೆ ದರ ನಿಗದಿಗೊಳಿಸಲಾಯಿತು.
`ಬಾಗಲಕೊಟೆ ಹಾಗೂ ಗದುಗಿನ ಎಪಿಎಂಸಿಗಿಂತ ಇಲ್ಲಿಯ ಎಪಿಎಂಸಿಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗುತ್ತದೆ ಎನ್ನುವ ಕಾರಣಕ್ಕೆ ಉಳ್ಳಾಗಡ್ಡಿ ಬೆಳೆದ ರೈತರು ಇಲ್ಲಿಗೆ ಆಗಮಿಸುತ್ತಾರೆ. ಸೋಮವಾರ 150 ಲೋಡ್ ಒಮ್ಮೆಲೇ ಬಂದ ಪರಿಣಾಮ ದರ ದಿಢೀರ್ ಕುಸಿಯಿತು. ಹೀಗಾಗಿ ಗೊಂದಲ ಉಂಟಾಯಿತು.
ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆಯಲಾಗಿದ್ದು ಪ್ರತಿ ಕ್ವಿಂಟಲ್ ಉಳ್ಳಾಗಡ್ಡಿಗೆ ರೂಪಾಯಿ 1500ಗಳ ಬೆಂಬಲ ಬೆಲೆ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ~ ಎಂದು ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷರಾದ ಶಂಕರಗೌಡ ಪಾಟೀಲ ಅವರು ತಿಳಿಸಿದರು.