ಗುಲ್ಬರ್ಗ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಸೇರಿದಂತೆ ಎಂಟು ಮಂದಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ಗುಲ್ಬರ್ಗ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಈ ಸಂಬಂಧ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡು ಮಾಡಿರುವ ಶಿಫಾರಸಿಗೆ ರಾಜ್ಯಪಾಲ ಭಾರದ್ವಾಜ್ ಅಂಕಿತ ಹಾಕಿದ್ದಾರೆ.
ಕೇಂದ್ರ ಸಚಿವ ಖರ್ಗೆ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಉದ್ಯಮಿ ಎಸ್.ಎಸ್.ಪಾಟೀಲ ಕಡಗಂಚಿ, ಅಂತರರಾಷ್ಟ್ರೀಯ ಕಲಾವಿದ ಶಂಕರಗೌಡ ಬೆಟ್ಟದೂರು, ಧಾರ್ಮಿಕ ಗುರು ಮಾಣಿಕಪ್ರಭು, ನಿವೃತ್ತ ಪ್ರಾಚಾರ್ಯ ಗಣಪತಿ ಬಿ.ಸಜ್ಜನ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಮಹೇಶ ಜೋಶಿ, ಮಹಾರಾಷ್ಟ್ರದ ರಾಮಲಾಲ್ ಮಹಾರಾಜ್ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಇದೇ 17ರಂದು ಘಟಿಕೋತ್ಸವ ನಡೆಯಲಿದೆ.