ಗಾಜಿಯಾಬಾದ್ (ಐಎಎನ್ಎಸ್): ಕಾಶ್ಮೀರ ಕುರಿತಾದ ಹೇಳಿಕೆ ಖಂಡಿಸಿ ಹಿಂದೂ ಕಾರ್ಯಕರ್ತರು ಬುಧವಾರ ಇಲ್ಲಿನ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಈ ಘಟನೆಗೆ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಕಾರಣವೆಂದು ಎಎಪಿ ಮುಖಂಡ ಪ್ರಶಾಂತ್ ಭೂಷಣ್ ಅವರು ಆರೋಪಿಸಿದ್ದಾರೆ.
ಧ್ವಜ ಹಾಗೂ ಬಡಿಗೆಗಳನ್ನು ಹಿಡಿದು ಕೌಶಂಬಿಯಲ್ಲಿರುವ ಎಎಪಿ ಕಚೇರಿಗೆ ನುಗ್ಗಿದ ಸುಮಾರು 25ರಿಂದ 40 ಜನರಷ್ಟಿದ್ದ ತಂಡವು ಕಚೇರಿಯೊಳಗಿನ ಪಿಠೋಪಕರಣಗಳನ್ನು ಒಡೆದು ಹಾಕಿ, ಕಿಟಕಿಯ ಗಾಜುಗಳನ್ನು ಪುಡಿಮಾಡಿ, ಕಚೇರಿ ಮುಂದಿನ ಹೂವಿನ ಕುಂಡಗಳನ್ನು ಧ್ವಂಸಮಾಡಿದರು ಎಂದು ಎಎಪಿ ಪಕ್ಷದ ನಾಯಕ ದಿಲೀಪ್ ಪಾಂಡೆ ತಿಳಿಸಿದರು.
ದಾಳಿಯ ವೇಳೆ ಹಿಂದು ರಕ್ಷಾ ದಳದ ಕಾರ್ಯಕರ್ತರು ಪಲಾಯನಕ್ಕೂ ಮುನ್ನ ಎಎಪಿ ನಾಯಕರಿಗೆ ಬೆದರಿಕೆಯನ್ನು ಒಡ್ಡಿದರು ಎಂದು ಪಾಂಡೆ ಹೇಳಿದರು. ಘಟನಾ ಸ್ಥಳದಲ್ಲಿ ಹಿಂದು ರಕ್ಷಾ ದಳದ ಬ್ಯಾನರ್ ಪತ್ತೆಯಾಗಿದೆ.
ಈ ದಾಳಿಯು ಎಎಪಿಯ ಏಳಿಗೆಯನ್ನು ಸಹಿಸದ ಬಿಜೆಪಿ ಹಾಗೂ ಸಂಘಪರಿವಾರದವರ ಹತಾಶೆ ಮನೋಭಾವವನ್ನು ತೋರಿಸುತ್ತದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.
ದಾಳಿ ನಡೆದ ಎಎಪಿ ಕಚೇರಿಯು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿವಾಸದ ಸಮೀಪದಲ್ಲಿದೆ.
ಬಿಜೆಪಿ ಖಂಡನೆ: ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಅವರು `ಕಾನೂನನ್ನು ಕೈಗೆತ್ತಿಕೊಳ್ಳಲು ಯಾರೊಬ್ಬರಿಗೂ ಅಧಿಕಾರವಿಲ್ಲ. ನಾವು ದಾಳಿಯನ್ನು ಖಂಡಿಸುತ್ತೇವೆ. ಆದರೆ ನಾವು ಭೂಷಣ್ ಅವರು ಹೇಳಿಕೆಯನ್ನು ಮರೆಯುವುದಿಲ್ಲ. ಅದನ್ನೂ ಕೂಡ ನಾವು ಖಂಡಿಸುತ್ತೇವೆ' ಎಂದು ಹೇಳಿದರು.