ಬೆಳಗಾವಿ: ಕೆಲಸ ಮಾಡುವ ಸ್ಥಳದಲ್ಲಿ ಸಹದ್ಯೋಗಿಗಳು ಅಥವಾ ಮಾಲೀಕರು ಎಚ್.ಐ.ವಿ. ಸೋಂಕಿನಿಂದ ಬಳಲುತ್ತಿರುವ ಕೆಲಸಗಾರರಿಗೆ ತಾರತಮ್ಯ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸಂತೋಷ ಹಿಪ್ಪರಗಿ ಎಚ್ಚರಿಸಿದರು.
ನಗರದ ಕೆಬಿಆರ್ ರಂಗಮಂದಿರದಲ್ಲಿ ಮಂಗಳವಾರ ನಡೆದ ಸ್ಪಂದನ ಎಚ್.ಐ.ವಿ. ಸೋಂಕಿತರ ಜಾಲ ಸಂಸ್ಥೆಯ ಏಳನೆಯ ವಾರ್ಷಿಕೋತ್ಸವ ಹಾಗೂ ನಂದನ ಮಕ್ಕಳ ಧಾಮದ ಮೂರನೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಎಚ್.ಐ.ವಿ. ಸೋಂಕಿನಿಂದ ಬದುಕುತ್ತಿರುವವರು ಶಾರೀರಿಕ ಹಾಗೂ ಮಾನಸಿಕವಾಗಿ ಕೆಲಸ ಮಾಡಲು ಶಕ್ತರಾಗಿದ್ದು, ಕೇವಲ ಎಚ್ಐವಿ ಇದೆಯೆಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕುವುದು ಯಾರಿಂದಲೂ ಸಾಧ್ಯವಿಲ್ಲ ಹಾಗೂ ಇದಕ್ಕಾಗಿ ಎಚ್ಐವಿ ತಪಾಸಣೆ ಮಾಡಿಕೊಳ್ಳಬೇಕು ಎಂದು ಯಾರೂ ಒತ್ತಡ ಹಾಕುವಂತಿಲ್ಲ~ ಎಂದರು.
ಸ್ಪಂದನ ಸಂಸ್ಥೆಯ ದಿನದ 24 ಗಂಟೆಗಳ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ಮಾತನಾಡಿ, ಎಚ್.ಐ.ವಿ. ಸೋಂಕಿನಿಂದ ಬದುಕುತ್ತಿರುವವರು ಕೊಂಚ ಪ್ರಯತ್ನದಿಂದ ಭವಿಷ್ಯವನ್ನು ಹೆಚ್ಚು ಉತ್ತಮವಾಗಿ ಮಾಡಿಕೊಳ್ಳಬಹುದು. ಅವರು ಆಶಾವಾದಿಯಾಗಿರಬೇಕು ಎಂದರು.
ಬರ್ಡ್ಸ್ ಪ್ರಾಚಾರ್ಯ ಬಿ.ಕೆ. ಬರ್ಲೆಯ್ಯ ಮಾತನಾಡಿ, ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಟಾನವಾಗಬೇಕಾದರೆ ಸಮುದಾಯದ ಭಾಗವಹಿಸುವಿಕೆ ಬಹಳ ಮುಖ್ಯವಾಗುತ್ತದೆ. ಸ್ಪಂದನ ಸಂಸ್ಥೆಯು ಎಚ್.ಐ.ವಿ ನಿಯಂತ್ರಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ನ್ಯಾಯವಾದಿ ಎನ್. ಅರ್ ಲಾತೂರ ಮಾತನಾಡಿ, ಎಚ್.ಐ.ವಿ. ಸೋಂಕಿತರ ಮಹಿಳೆಯರು ತಮ್ಮ ಗಂಡನ ಮರಣದ ತರುವಾಯ ಆಸ್ತಿಯ ಹಕ್ಕು ಪಡೆಯುವಲ್ಲಿ, ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಪಡೆಯುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಆ ನಿಟ್ಟಿನಲ್ಲಿ ನಾವೆಲ್ಲರೂ ಸಹಾಯ ಹಸ್ತು ಚಾಚಬೇಕಿದೆ ಎಂದರು.
ಡಾ. ಶೋಭನ ಪಟ್ಟೇದ, ಸ್ಪಂದನ ಸಂಸ್ಥೆ ಅಧ್ಯಕ್ಷ ಮಹಾಂತೇಶ ಮಾಳಿ, ಶಶಿಭೂಷಣ, ಡಾ.ಅಶೋಕ ಮುರಗೋಡ, ಮಾಜಿ ಮೇಯರ್ ವಿಜಯ ಮೋರೆ, ಮಲ್ಲೆೀಶ ಚೌಗಲಾ, ಸರಳಾ ಹೇರೆಕರ ಮತ್ತಿತರರು ಪಾಲ್ಗೊಂಡಿದ್ದರು.
ಎನ್.ಎಂ ದೇವೆಂದ್ರಪ್ಪ ನಿರೂಪಿಸಿದರು. ನದಾಫ ಸ್ವಾಗತಿಸಿದರು. ಇಸ್ಮಾಯಿಲ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.