ರಾಜ್ಯದಲ್ಲಿ ಎಚ್ಐವಿ ಸೋಂಕು ಹಾಗೂ ಏಡ್ಸ್ ನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎಂಬ ವರದಿ (ಪ್ರ ವಾ ಜ. 18) ಓದಿ ಬೇಸರವಾಯಿತು. ಎಚ್ಐವಿ/ಏಡ್ಸ್ ಪೀಡಿತ ಮಕ್ಕಳನ್ನು ಮಟ್ಟುವುದರಿಂದ ರೋಗ ಹರಡುವುದಿಲ್ಲ ಎಂದು ತಜ್ಞರು ತಿಳಿಸಿದ್ದರೂ ಜನರು ಅದನ್ನು ನಂಬುತ್ತಿಲ್ಲ. ಹೀಗಾಗಿ ಸೋಂಕು ಪೀಡಿತ ಮಕ್ಕಳು ಸಮಾಜದ ಮುಖ್ಯ ವಾಹಿನಿಯಿಂದ ಹೊರಗೆ ಉಳಿಯುವಂತೆ ಆಗಿದೆ. ಈ ಬೆಳವಣಿಗೆ ದುರದೃಷ್ಟಕರ. ರಾಜ್ಯದಲ್ಲಿರುವ ಎಚ್ಐವಿ ಸೋಂಕು ಪೀಡಿತ 14,500ಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಎಚ್ಐವಿ ಮತ್ತು ಏಡ್ಸ್ ಹರಡದಂತೆ ತಡೆಯಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅದರಿಂದ ಹೆಚ್ಚಿನ ಪ್ರಯೋಜನ ಆಗಿಲ್ಲ. ಪ್ರಜ್ಞಾವಂತರು ಹಾಗೂ ಸಾಮಾಜಿಕ ಸಂಘಟನೆಗಳು ಸೋಂಕು ಪೀಡಿತ ಮಕ್ಕಳು ಸಮಾಜದಿಂದ ಹೊರಗೆ ಉಳಿಯುವುದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ನಾಟಕ, ಟೀವಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಬಹುದು. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕು.