ಬೆಂಗಳೂರು: ಸಾರ್ವಜನಿಕ ಜಮೀನು ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್, ಬಿಬಿಎಂಪಿ ಆಯುಕ್ತ ಸಿದ್ದಯ್ಯ ವಿರುದ್ಧ ದಾಖಲಿಸಿದ್ದ ಎರಡು ಎಫ್ಐಆರ್ಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ, ಎಫ್ಐಆರ್ಗಳಿಗೆ ತಡೆಯಾಜ್ಞೆ ನೀಡಿದರು.
ಕರ್ನಾಟಕ ಭೂಕಂದಾಯ ಕಾಯ್ದೆ ಸೆಕ್ಷನ್ 192(ಎ) (ಸರ್ಕಾರಿ ಜಾಗ ದುರ್ಬಳಕೆ), 192(ಬಿ) (ನಕಲಿ ದಾಖಲೆ ಸೃಷ್ಟಿ) ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 119 (ಸರ್ಕಾರಿ ಅಧಿಕಾರಿಯಿಂದ ಭ್ರಷ್ಟಾಚಾರ), 409 (ಸರ್ಕಾರಿ ಅಧಿಕಾರಿಯಿಂದ ನಂಬಿಕೆದ್ರೋಹ) ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು.
ರಾಜಕಾಲುವೆ, ನಾಲಾ ಮತ್ತು ಬಂಡಿ ಜಾಡುಗಳ ಅತಿಕ್ರಮಣಕ್ಕೆ ಬಿಬಿಎಂಪಿ ಆಯುಕ್ತರು ಮತ್ತು ಜಂಟಿ ಆಯುಕ್ತರು (ನಗರ ಯೋಜನೆ) ಸಹಕರಿಸಿದ್ದಾರೆ ಎಂಬ ಆರೋಪ ಮೊದಲ ಎಫ್ಐಆರ್ನಲ್ಲಿದೆ. ಎ.ವಿ. ಶ್ರಿನಿವಾಸಮೂರ್ತಿ ಎಂಬುವರು ನೀಡಿದ ದೂರು ಆಧರಿಸಿ ಬಿಎಂಟಿಎಫ್ ಈ ಕ್ರಮ ಕೈಗೊಂಡಿತ್ತು.
ನಾಗಶೆಟ್ಟಿಹಳ್ಳಿಯಲ್ಲಿ ಆರ್ಎಂವಿ ಬಡಾವಣೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎನ್ಟಿಐ ಹೌಸಿಂಗ್ ಸೊಸೈಟಿಗೆ ನೀಡಿತ್ತು. ಆ ಸಂಸ್ಥೆ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಬದಲು ಬಿಲ್ಡರ್ ಒಬ್ಬರಿಗೆ ್ಙ10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿದೆ ಎಂಬುದು ಶ್ರಿನಿವಾಸಮೂರ್ತಿ ಅವರ ದೂರು.