ಚಿತ್ರದುರ್ಗ: ವಿದೇಶದ ಹಣ ಇಲ್ಲಿ ಬರಬಾರದು. ವಿದೇಶಿ ಬಂಡವಾಳ ನಮ್ಮ ದೇಶಕ್ಕೆ ಹರಿದು ಬರುವುದು ನನಗಂತೂ ಇಷ್ಟವಿಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬಸವಕೇಂದ್ರ ಮತ್ತು ಮುರುಘಾಮಠದ ಆಶ್ರಯದಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವ್ಯಾಪಾರವನ್ನು ಇತರರಿಗೆ ಏಕೆ ನೀಡಬೇಕು.
ಪರಿಸ್ಥಿತಿಗಳು ಏನೇ ಬದಲಾಗಿದ್ದರೂ ನಮ್ಮ ದೇಶದ ವ್ಯಾಪಾರವನ್ನು ಬೇರೆ ದೇಶದವರ ಕೈಯಲ್ಲಿ ನೀಡಬಾರದು. ನಮ್ಮ ಮಾರ್ವಾಡಿ ಶೋಷಣೆ ಮಾಡಿದರೂ ಪರವಾಗಿಲ್ಲ. ಆ ಶೋಷಣೆ ಮಾಡುವ ವ್ಯಾಪಾರಿ ನಮ್ಮವನಾಗಿರುತ್ತಾನೆ ಹೊರತು ವಿದೇಶಿಯಾಗಿರುವುದಿಲ್ಲ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಸಹಕಾರ ಚಳವಳಿ ಆರಂಭಿಸಿದಾಗ ವಿದೇಶ ಉತ್ಪನ್ನಗಳ ಬಳಕೆ ನಿಲ್ಲಿಸಲಾಯಿತು. ಇದರಿಂದ ಇಂಗ್ಲೆಂಡ್ ವ್ಯಾಪಾರ ನಿಲ್ಲಲಿಲ್ಲವೇ ಎಂದು ಪ್ರಶ್ನಿಸಿದರು.
ಗುಡಿ ಕೈಗಾರಿಕೆಗಳು ಕ್ರಮೇಣವಾಗಿ ನಶಿಸುತ್ತಾ ಬಂದಿವೆ. ಎಲ್ಲರೂ ಕಾರ್ಖಾನೆ ಉತ್ಪನ್ನಗಳಿಗೆ ಮೊರೆ ಹೋಗುತ್ತಿದ್ದಾರೆ. ಖಾದಿಗೆ ಉತ್ತೇಜನ ನೀಡಬೇಕು. ನಾನು ಇಂದಿಗೂ ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದೇನೆ. ಕರ್ನಾಟಕ ರೇಷ್ಮೆಗೆ ಖ್ಯಾತಿ ಪಡೆದಿದೆ. ಕರ್ನಾಟಕದ ನೇಕಾರರು ಪರಿಣತಿ ಪಡೆದಿದ್ದಾರೆ. ಉತ್ತಮ ಕೌಶಲಗಳನ್ನು ಹೊಂದಿದ್ದಾರೆ. ಇಂತಹ ದೇಶಿ ವಸ್ತುಗಳ ಉತ್ಪಾದನೆಗೆ ನಾವು ಬೆಂಬಲ ನೀಡಲೇಬೇಕಾಗಿದೆ ಎಂದು ನುಡಿದರು.