ನವದೆಹಲಿ (ಪಿಟಿಐ): ಬಹು ಬ್ರಾಂಡ್ ಚಿಲ್ಲರೆ ವಲಯದಲ್ಲಿ ಎಫ್ಡಿಐಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್ ನೆರವು ಬೇಕೆಂದು ಶುಕ್ರವಾರ ಸುಪ್ರೀಂಕೋರ್ಟ್ ಹೇಳಿದೆ.
ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಅಥವಾ ಸಾಲಿಸಿಟರ್ ಜನರಲ್ ಆರ್. ನಾರಿಮನ್ ಅವರಿಗೆ ಅರ್ಜಿಯ ಪ್ರತಿ ನೀಡುವಂತೆ ನ್ಯಾಯಮೂರ್ತಿಗಳಾದ ಆರ್.ಎಂ. ಲೋಧ ಹಾಗೂ ಎ.ಆರ್. ದವೆ ಅವರನ್ನೊಳಗೊಂಡ ಪೀಠವು ಅರ್ಜಿದಾರರಿಗೆ ಸೂಚಿಸಿದೆ.
ವಿಚಾರಣೆಯನ್ನು ಇದೇ 12ಕ್ಕೆ ನಿಗದಿಪಡಿಸಿದ್ದು, ಅರ್ಜಿಯಲ್ಲಿ ಪ್ರಧಾನಿಯವರನ್ನು ಕಕ್ಷೀದಾರರಾಗಿ ಹೆಸರಿಸಿರುವುದನ್ನು ತೆಗೆದು ಹಾಕುವಂತೆಯೂ ಅರ್ಜಿದಾರರಿಗೆ ಸೂಚನೆ ನೀಡಿದೆ.
`ಈ ವಿಷಯದಲ್ಲಿ ನಮಗೆ ಸ್ಪಷ್ಟನೆ ಬೇಕಾಗಿದೆ. ಹಾಗಾಗಿ ಉನ್ನತ ಕಾನೂನು ಅಧಿಕಾರಿಗಳ ನೆರವು ಕೇಳಿದ್ದೇವೆ~ ಎಂದೂ ಪೀಠ ಹೇಳಿದೆ.
ರಾಷ್ಟ್ರಪತಿ ಅಥವಾ ಸಂವಿಧಾನದ ಅನುಮೋದನೆ ಇಲ್ಲದೆಯೇ ಎಫ್ಡಿಐಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಪಿಸಿ ವಕೀಲ ಎಂ.ಎಲ್. ಶರ್ಮ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ವಿಶ್ವಾಸ: ವಿಮೆ ಹಾಗೂ ವಿಂಚಣಿ ಕ್ಷೇತ್ರದಲ್ಲಿ ಎಫ್ಡಿಐಗೆ ಸಂಬಂಧಿಸಿ ಸರ್ಕಾರ ತೆಗೆದುಕೊಂಡ ನಿರ್ಧಾರವು ಸಂಸತ್ನಲ್ಲಿ ಅನುಮೋದನೆಯಾಗಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.
ರಾಹುಲ್ ಬೆಂಬಲ: ಬಹು ಬ್ರಾಂಡ್ ಚಿಲ್ಲರೆ ವಲಯದಲ್ಲಿ ಎಫ್ಡಿಐಗೆ ಅನುಮೋದನೆ ನೀಡಿರುವ ಸರ್ಕಾರ ಕ್ರಮವನ್ನು ಸ್ವಾಗತಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ರಾಹುಲ್ ಗಾಂಧಿ, `ರೈತರು ದಲ್ಲಾಳಿಗಳಿಂದ ಶೋಷಣೆಗೆ ಒಳಗಾಗುವುದನ್ನು ಇದು ತಪ್ಪಿಸಲಿದೆ~ ಎಂದು ಹೇಳಿದ್ದಾರೆ.
ಸಿಪಿಎಂ ವಿರೋಧ: ಸರ್ಕಾರದ ಈ ನಿರ್ಧಾರದಿಂದ ಭಾರತದ ಹಣಕಾಸು ವಲಯವು ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಸಂಸತ್ನಲ್ಲಿ ಇವುಗಳಿಗೆ ಹಿನ್ನಡೆಯಾಗುವಂತೆ ಮಾಡಬೇಕೆಂದು ಸಿಪಿಎಂ ರಾಜಕೀಯ ಪಕ್ಷಗಳಿಗೆ ಕರೆ ನೀಡಿದೆ.