ಶಿಗ್ಗಾವಿ: ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಪ್ರಾಚಾರ್ಯ ಆರ್.ಡಿ.ಮೂಕಾಶಿ ನಿರ್ಲಕ್ಷತೆ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿ ನೂರಾರು ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಮಂಗಳವಾರ ಎರಡನೇ ದಿನವೂ ಪ್ರತಿಭಟನೆ ನಡೆಸಿದರು.
ಪ್ರಾಚಾರ್ಯ ಆರ್.ಡಿ.ಮೂಕಾಶಿ ಅವರು ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೆ. ಕಾಲೇಜಿನ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ನೆರವಾಗಲೆಂದು ಶಿಷ್ಯವೇತನ ನೀಡುವ ಮೂಲಕ ನೆರವಾಗುತ್ತಿದೆ. ಆದರೆ ಇಲ್ಲಿನ ಪ್ರಾಚಾರ್ಯರು ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುತ್ತಿಲ್ಲ. ಹೀಗಾಗಿ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿದರು.
ಸ್ಪಂದನಾ ಸಂಘದ ಪ್ರವೇಶಕ್ಕಾಗಿ ಪ್ರತಿ ವಿದ್ಯಾರ್ಥಿಗಳಿಂದ ಸುಮಾರು 200 ರೂಪಾಯಿ ಸಂಗ್ರಹಿಸಲಾಗಿದೆ. ಆದರೆ, ಈ ಸಂಘಟನೆಯಿಂದ ಯಾವುದೆ ಚಟುವಟಿಕೆ ಕಾರ್ಯಗಳು ನಡೆದಿಲ್ಲ. ಸಂಗ್ರ ಹವಾದ ವಿದ್ಯಾರ್ಥಿಗಳ ಹಣ ಸಂಘದ ಖಾತೆಯಲ್ಲಿ ಜಮಾ ಆಗಿರುವುದಿಲ್ಲ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರ ಧಾರವಾಡ ಕೈಗಾರಿಕಾ ತರಬೇತಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರಮೇಶ ದಾಖಲೆ ಗಳನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಗೌರವ ಉಪನ್ಯಾಸಕರ ಗೌರವಧನ ಮತ್ತು ಷ್ಯವೇತನ ಮಂಜೂರಾಗಿದ್ದರೂ ಪ್ರಾಚಾರ್ಯರರು ವಿಳಂಬ ಮಾಡಿದ್ದಾರೆ.
ಸ್ಪಂದನಾ ಸಂಘಟನೆಗಾಗಿ ವಿದ್ಯಾರ್ಥಿಗಳಿಂದ 200 ರೂಪಾಯಿ ಸಂಗ್ರಹಿಸಿದ ಬಗ್ಗೆ ಸರಿಯಾದ ಮಹಿತಿ ನೀಡಿಲ್ಲ. ಎಂಇಎಸ್ ತರಬೇತಿಗಾಗಿ ಸಂಗ್ರಹಿಸಿದ ಸುಮಾರು 3ಲಕ್ಷ ರೂಪಾಯಿ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡು ಬರುತ್ತಿದೆ. ಅಲ್ಲದೆ ಪ್ರಾಚಾರ್ಯ ಮೊಕಾಶಿ ತಪ್ಪೋಪಿಕೊಂಡಿದ್ದಾರೆ. ಹೀಗಾಗಿ ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿ ಚವ್ಹಾಣ, ಹೊಸಪೇಟೆ, ಸಾತಗೊಂಡ ಎಂಬುವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲು ಸಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
ಸುಭಾಷ್ ಮಾದರ, ನಿರಂಜನ ಕಲ್ಲನಗೌಡರ, ಮಲ್ಲೇಶಪ್ಪ ಗಣಪ್ಪನವರ, ಸೋಮಲಿಂಗಪ್ಪ ಕಾರಡಗಿ, ರವಿ ವಿರಪ್ಪನವರ, ಫಕ್ಕೀರೇಶ ಮರಡೂರ, ಕೆ.ಎಚ್.ಹಂಸರಾಜ, ಶಶಿಕುಮಾರ, ನಿಂಗಪ್ಪ ಯಲವಿಗಿ, ಎಂ.ಎನ್. ಇಂಗಳಗಿ, ದಾವಲ, ಗಾಫರ ಕುರಟ್ಟಿ, ಆಸಲಂ ನದಾಫ, ವಿ.ಎಸ್.ಗಿರಿಮಠ ಸೇರಿದಂತೆ ಗೌರವ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.