ಲಕ್ಷ್ಮೇಶ್ವರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕ ಗೋವಿಂದ ಗೌಡ ಹಾಗೂ 10 ಜನ ವಿಷಯ ತಜ್ಞರು ಪಟ್ಟಣದ ಸ್ಕೂಲ್ ಚಂದನದ ಎಸ್ಎಸ್ಎಲ್ಸಿ ಮಕ್ಕಳಿಗೆ ಈಚೆಗೆ ಭೇಟಿ ನೀಡಿ ಪರೀಕ್ಷೆಯ ಬಗ್ಗೆ ವಿಷಯವಾರು ವಿಶೇಷ ತರಬೇತಿ ನಡೆಸಿಕೊಟ್ಟರು.
ಪರೀಕ್ಷಾ ತಯಾರಿ, ಹಂತ ಹಂತವಾಗಿ ಓದುವ ರೀತಿ, ಪ್ರಶ್ನೆ ಪತ್ರಿಕೆ ಬಿಡಿಸುವ ರೀತಿ ಕುರಿತು ಹತ್ತು ಜನ ವಿಷಯ ತಜ್ಞರು ವೈಯಕ್ತಿಕವಾಗಿ ತರಗತಿ ತೆಗೆದುಕೊಂಡು ಪಾಠ ಮಾಡಿದರು. ತರಬೇತಿ ನಡು ನಡುವೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅವರ ಪ್ರತಿಭೆ ಕಂಡು ಸಂತಸಪಟ್ಟರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕ ಗೋವಿಂದಗೌಡ್ರ ಮಾತನಾಡಿ `ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡುತ್ತಿದ್ದರೆ ಪರೀಕ್ಷೆಗೆ ಹೆದರುವ ಅಗತ್ಯ ಇಲ್ಲ. ಶಿಕ್ಷಕರು ಹೇಳುವ ಪಾಠಗಳನ್ನು ಮಕ್ಕಳು ಗಮನವಿಟ್ಟು ಕೇಳಿ ಮನನ ಮಾಡಿಕೊಳ್ಳಬೇಕು~ ಎಂದರು.
ಗಣಿತ ವಿಷಯ ಪರೀಕ್ಷಾ ತಜ್ಞ ವರದರಾಜನ್ ಮಕ್ಕಳನ್ನು ಉದ್ಧೇಶಿಸಿ ಮಾತನಾಡಿದರು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಟಿ.ಈಶ್ವರ ಅಧ್ಯಕ್ಷತೆ ವಹಿಸಿದ್ದರು. ಆಕಾಶ ದುಂಡಸಿ ಸ್ವಾಗತಿಸಿದರು. ಸಂಗೀತಾ ಮತ್ತು ವಿಕ್ರಮ ಕಾರ್ಯಕ್ರಮ ನಿರೂಪಿಸಿದರು. ಈರಣ್ಣಗೌಡ ವಂದಿಸಿದರು.