ಶ್ರೀನಿವಾಸಪುರ: ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ ಗುಣಾತ್ಮಕ ಫಲಿತಾಂಶ ಪಡೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಕಿವಿಮಾತು ಹೇಳಿದರು. ಇಲ್ಲಿನ ಸುಗಟೂರ ಸಬರಮತಿ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸುವುದು ಬಗೆ ಕುರಿತು ಮಾತನಾಡಿದರು.
ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡ ತಕ್ಷಣ ಅದರಲ್ಲಿ ಎಲ್ಲ ಹಾಳೆಗಳು ಇವೆಯೇ ಮತ್ತು ಪ್ರಶ್ನೆಗಳು ಸರಿಯಾಗಿ ಅಚ್ಚಾಗಿವೆಯೇ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಓದಿಕೊಂಡು ಮೆದುಳಿಗೆ ರವಾನಿಸಬೇಕು. ಬಹು ಆಯ್ಕೆ ಪ್ರಶ್ನೆಗಳನ್ನು ಹೆಚ್ಚು ಎಚ್ಚರಿಕೆಯಿಂದ ಉತ್ತರಿಸಬೇಕು. ಒಮ್ಮೆ ಬರೆದ ಉತ್ತರವನ್ನು ಹೊಡೆದು ಮತ್ತೆ ಬರೆದರೆ ಅದನ್ನು ಮೌಲ್ಯಮಾಪನ ಮಾಡುವುದಿಲ್ಲ ಎಂದು ಹೇಳಿದರು.
ಗರಿಷ್ಟ ಅಂಕ ಪಡೆಯಲು ಬರವಣಿಗೆ ಅಂದವಾಗಿರಬೇಕು. ಕಾಗುಣಿತ (ಸ್ಪೆಲ್ಲಿಂಗ್) ತಪ್ಪು ಇರಬಾರದು. ಪರೀಕ್ಷೆ ಬರೆಯಲು ಅಗತ್ಯವಾದ ಎಲ್ಲ ಸಾಮಗ್ರಿ ತಮ್ಮೊಂದಿಗೆ ಕೊಂಡೊಯ್ಯುವುದುಅತ್ಯಗತ್ಯ. ಆಗಮಾತ್ರ ಯಾವುದೇ ಒತ್ತಡ ಇಲ್ಲದೆ ಪರೀಕ್ಷೆಯನ್ನು ಬರೆಯಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಉಪ ಪ್ರಾಂಶುಪಾಲ ಸತ್ಯನಾರಾಯಣರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕ ವಿ.ಬೈರಪ್ಪ, ತೊಟ್ಲಿ ಗ್ರಾಮದ ಶಾಂತಿ ನಿಕೇತನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಹಿರಿಯ ಶಿಕ್ಷಕರಾದ ಎಂ.ವಿ.ದಾನಪ್ರಕಾಶ್, ಬಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಪಿ.ಬಾಲಕ್ರಿಷ್ಣಪ್ಪ ಸ್ವಾಗತಿಸಿದರು. ಆರ್.ವೆಂಕಟೇಶ್ ವಂದಿಸಿದರು.