ಸುಳ್ಯ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯು ಎಸ್ಡಿಪಿಐ ಅಭ್ಯರ್ಥಿ ಕೂಸಪ್ಪ ಅವರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಸಂಘದ ತಾಲ್ಲೂಕು ಸಮಿತಿ ಸಂಚಾಲಕ ಆನಂದ ಮಿತ್ತಬೈಲು ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮೀಸಲಾತಿ ಕ್ಷೇತ್ರವಾಗಿರುವ ಸುಳ್ಯದ ದಲಿತರ ಬದುಕು ಹಂದಿ-ನಾಯಿಗಳಿಗಳಿಗಿಂತಲೂ ಹೀನಾಯ ಸ್ಥಿತಿಗೆ ತಲುಪಿದ್ದು, ಇಲ್ಲಿಯ ಪ್ರತಿನಿಧಿಯಾಗಿ ಕಳೆದ 20 ವರ್ಷಗಳಿಂದ ಆಡಳಿತ ನಡೆಸಿದ ಅಂಗಾರರು ಈ ಸಮುದಾಯವನ್ನು ವಂಚಿಸಿದ್ದಾರೆ' ಎಂದು ದೂರಿದರು.
`ಅಂಬೇಡ್ಕರ್ ಹೋರಾಟದ ಫಲವಾಗಿ ದೊರೆತ ಮೀಸಲಾತಿಯ ಪ್ರಯೋಜನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಂದಿನ ರಾಜಕೀಯ ಪಕ್ಷಗಳು ವಿಫಲವಾಗಿದ್ದು, ಆದ್ದರಿಂದ ಪರ್ಯಾಯ ಮಾರ್ಗಗಳನ್ನು ಅಲೋಚಿಸುವುದು ಅನಿವಾರ್ಯವಾಗಿದೆ' ಎಂದು ಹೇಳಿದರು.
`ಸವಣೂರಿನಲ್ಲಿ ಬಾಬಾ ಸಾಹೆಬ್ ಅಂಬೇಡ್ಕರ್ ಸಮುದಾಯ ಭವನದ ನಾಮ ಫಲಕ ತೆರವುಗೊಳಿಸಿದಾಗ ಬಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಪ್ರತಿಭಟಿಸಲಿಲ್ಲ. ಹೋರಾಟ ಮಾಡಲಿಲ್ಲ. ಆದರೆ ಕೇವಲ ಎಸ್ಡಿಪಿಐ ಪಕ್ಷ ಮಾತ್ರ ಆ ಸಂದರ್ಭದಲ್ಲಿ ದಲಿತರ ಹೋರಾಟಕ್ಕೆ ಬೆಂಬಲ ಘೋಷಿಸಿ ಪ್ರತಿಭಟನೆಗೆ ಬೆಂಬಲ ನೀಡಿತ್ತು' ಎಂದರು.