ಕೊಚ್ಚಿ: ಅಬುಧಾಬಿ- ಕೊಚ್ಚಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಾದ ಅವಾಂತರದಿಂದ ಪ್ರಯಾಣಿಕರು ಪರದಾಡುವಂತಾದ ಪ್ರಸಂಗದ ಮರುದಿನವೇ ಮತ್ತೆ ಇಂತಹುದೇ ಪ್ರಕರಣ ನಡೆದಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ತಾಂತ್ರಿಕ ದೋಷ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಬಹರೇನ್ನಿಂದ ಹೊರಟ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 20 ಗಂಟೆ ವಿಳಂಬವಾಗಿ ಕೊಚ್ಚಿ ತಲುಪಿತು. ಇದರಿಂದ ಸಹನೆ ಕಳೆದುಕೊಂಡ ಕೆಲ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ಬಹರೇನ್ನಿಂದ ಈ ವಿಮಾನ ಕೊಯಿಕ್ಕೊಡ್ ಮಾರ್ಗವಾಗಿ ಕೊಚ್ಚಿ ತಲುಪಬೇಕಿತ್ತು. ಆದರೆ ಕೊಯಿಕ್ಕೋಡ್ನಲ್ಲಿ ಇಳಿಯದೆ ನೇರ ಕೊಚ್ಚಿಯಲ್ಲಿ ಇಳಿಯಿತು. ಇದರಿಂದ ಆಕ್ರೋಶಗೊಂಡ 47 ಪ್ರಯಾಣಿಕರು ಪಾರ್ಕಿಂಗ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು. ಒಟ್ಟು 119 ಪ್ರಯಾಣಿಕರು ಕೊಯಿಕ್ಕೋಡ್ಗೆ ತೆರಳಬೇಕಾಗಿತ್ತು.
ಏರ್ ಇಂಡಿಯಾ ಮೂಲಗಳ ಪ್ರಕಾರ, ದೋಹಾ ವಾಯು ಕ್ಷೇತ್ರದಲ್ಲಿ ಹಾರಾಡುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕಾಕ್ಪಿಟ್ನಲ್ಲಿ ಎಚ್ಚರಿಕೆ ಸದ್ದು ಮೊಳಗಿದೆ. ಹಾಗಾಗಿ ವಿಮಾನವನ್ನು ಮುಂಬೈಯತ್ತ ತಿರುಗಿಸಿ ಇಳಿಸಿದ ನಂತರ 163 ಪ್ರಯಾಣಿಕರನ್ನು ಬೇರೆ ವಿಮಾನದಲ್ಲಿ ಕೊಯಿಕ್ಕೊಡ್ಗೆ ಕಳುಹಿಸಿಕೊಡಲಾಯಿತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಕೊಯಿಕ್ಕೋಡ್ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೇ ಕೊಚ್ಚಿಗೆ ತೆರಳಿತು.
`ಚಿಕ್ಕ ನೀರಿನ ಬಾಟಲ್ ಹಾಗೂ ಪ್ಲಮ್ ಕೇಕ್ ಬಿಟ್ಟರೆ ವಿಮಾನ ಸಿಬ್ಬಂದಿ ಬೇರೇನೂ ನಮಗೆ ನೀಡಿಲ್ಲ. ಕೊಚ್ಚಿಯಲ್ಲಿ ಊಟಕ್ಕೂ ಇದನ್ನೇ ನೀಡಲಾಯಿತು~ ಎಂದು ಪ್ರಯಾಣಿಕರಲ್ಲಿ ಒಬ್ಬರಾದ ನೌಫಾಲ್ ದೂರಿದರು.