ನವದೆಹಲಿ (ಪಿಟಿಐ/ಐಎಎನ್ಎಸ್): ಏರ್ಇಂಡಿಯಾ ಪೈಲಟ್ಗಳು ವೇತನ, ಭತ್ಯೆ ವಿಳಂಬ ಖಂಡಿಸಿ ಮುಷ್ಕರಕ್ಕೆ ಇಳಿದಿದ್ದು, ಶನಿವಾರ ಬೆಳಿಗ್ಗೆ ಸುಮಾರು 40 ಮಂದಿ ಪೈಲಟ್ಗಳು ಕೆಲಸಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ವಿಮಾನ ಸಂಚಾರಕ್ಕೆ ಅಡ್ಡಿಯಾಯಿತು. ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು.
ಕಳೆದ ಮಧ್ಯರಾತ್ರಿಯಿಂದ `ವೇತನ ಇಲ್ಲ - ಕೆಲಸ ಇಲ್ಲ~ ಪ್ರತಿಭಟನೆಗೆ ಪೈಲಟ್ಗಳು ತೊಡಗಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರು ಪೈಲಟ್ಗಳಿಗೆ ಒಂದರೆಡು ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಹಾಗೆಯೇ ಭತ್ಯೆಯನ್ನು ಕೆಲವು ತಿಂಗಳುಗಳಿಂದ ನೀಡಲಾಗಿಲ್ಲ. ಪೈಲಟ್ಗಳ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ ಏರ್ಇಂಡಿಯಾದ ಹಣಕಾಸು ಸ್ಥಿತಿಯೂ ತೀರಾ ದುಸ್ಥಿತಿಯಲ್ಲಿದೆ. ಈ ಸಂಬಂಧ ತಾವು ಮುಂದಿನ ವಾರ ಹಣಕಾಸು ಸಚಿವರ ಜತೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.
ಮುಂದಿನ ವಾರದ ಕೊನೆಯಹೊತ್ತಿಗೆ ವೇತನ ಪಾವತಿಸುವ ಭರವಸೆಯನ್ನು ಸಚಿವರು ನೀಡಿದರು.