ನವದೆಹಲಿ (ಪಿಟಿಐ): ಗ್ರಾಮೀಣ ಜನರ ಜೀವನಾಧಾರ ಯೋಜನೆಯಾದ `ಆಜೀವಿಕಾ ಪ್ರತಿಷ್ಠಾನ'ದ ಚಟುವಟಿಕೆಯನ್ನು ದೇಶಾದ್ಯಂತ ಅದರಲ್ಲೂ ಕೇಂದ್ರ ಹಾಗೂ ಪೂರ್ವ ಭಾಗಗಳಲ್ಲಿ ತ್ವರಿತವಾಗಿ ವಿಸ್ತರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಿಹೇಳಿದರು.
ಇಲ್ಲಿಯ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಪ್ರತಿಷ್ಠಾನದ (ಎನ್ಆರ್ಎಲ್ಎಂ) ದ್ವಿತೀಯ ವಾರ್ಷಿಕೋತ್ಸವದಲ್ಲಿ ಮಾತನಾಡಿ ಸೋನಿಯಾ ಅವರು ಈ ವಿಷಯ ತಿಳಿಸಿದರು.
`ಶೀಘ್ರ ನಡೆಯಲಿರುವ ಲೋಕಸಭಾ ಚುನಾವಣೆ ಹಾಗೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಈ ಯೋಜನೆ ಅನುಷ್ಠಾನಕ್ಕೆ ಒತ್ತಡ ಹೇರಲಾಗುತ್ತಿದೆ' ಎಂಬ ಟೀಕೆಯನ್ನು ಇದೇ ಸಂದರ್ಭಗಳಲ್ಲಿ ಅಲ್ಲಗಳೆದರು.
ದುರ್ಬಲ ವರ್ಗದವರು ಅದರಲ್ಲೂ ಮಹಿಳೆಯರ ಸಬಲೀಕರಣವೇ ಯುಪಿಎ ಸರ್ಕಾರದ ಮುಖ್ಯ ಗುರಿ ಎಂದು ಸೋನಿಯಾ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಈಶಾನ್ಯ ರಾಜ್ಯಗಳ ಹಾಗೂ ಉತ್ತರಾಖಂಡ, ಹಿಮಾಚಲ ಪ್ರದೇಶದಂತಹ ಗುಡ್ಡಗಾಡು ರಾಜ್ಯಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡುವ ಯೋಜನೆಯನ್ನೂ ಸೋನಿಯಾ ಈ ಸಂದರ್ಭದಲ್ಲಿ ಘೋಷಿಸಿದರು
ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ 7 ಕೋಟಿ ಬಡತನ ರೇಖೆ ಕೆಳಗಿನ (ಬಿಪಿಎಲ್) ಕುಟುಂಬಗಳನ್ನು ಬಡತನದಿಂದ ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು ಇದು ನಿಜಕ್ಕೂ ಪ್ರಯಾಸದ ಕೆಲಸ ಎಂದರು.