ಧಾರವಾಡ: ರೈಲು ಹಳಿಯ ಅಂಚಿನಲ್ಲಿರುವ ಬಾರಾಕೊಟ್ರಿ ಬಳಿಯ ಸಿದ್ಧಾರೂಢ ಕಾಲೊನಿಯ ಜನರು ಬಾರಾಕೊಟ್ರಿ–ಸಿದ್ಧಾರೂಢ ಕಾಲೊನಿ ಮಧ್ಯದ ಲಿಂಕ್ ರಸ್ತೆಯನ್ನು ನಿರ್ಮಿಸಿಕೊಡಿ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ), ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಹಲವು ಬಾರಿ ಪತ್ರ ಬರೆದರೂ, ಜಿಲ್ಲಾಧಿಕಾರಿ ಕಚೇರಿಗೆ ಹತ್ತಾರು ಬಾರಿ ಅಲೆದಾಡಿದರೂ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ.
ಅಧಿಕಾರಶಾಹಿಯ ಜಡತ್ವದಿಂದ ಬೇಸತ್ತ ಇಲ್ಲಿನ ನಾಗರಿಕರು ಹೈಕೋರ್ಟ್ನಲ್ಲಿಯೂ ಈ ಕುರಿತು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪರಾಮರ್ಶೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಹುಡಾಕ್ಕೆ ಸೂಚಿಸಿದೆ. ಆದಾಗ್ಯೂ ಕೆಲಸ ಮಾತ್ರ ಒಂದಿಂಚೂ ಆಗಿಲ್ಲ.
2005ರಿಂದಲೇ ಈ ಸಂಬಂಧ ಹೋರಾಟ ಆರಂಭಿಸಿದ ‘ಶ್ರೀ ಸಿದ್ಧಾರೂಢ ಕಾಲೊನಿ ನಿವಾಸಿಗಳ ಹಿತವರ್ಧಕ ಸಂಘ’ದ ಸದಸ್ಯರು ಪಾಲಿಕೆ ಸದಸ್ಯರಿಂದ ಹಿಡಿದು ಶಾಸಕರು, ಸಂಸದರು, ಸಚಿವರವರೆಗೂ ಹೋಗಿ ಮನವಿ ಸಲ್ಲಿಸಿದ್ದಾರೆ. ಸುಮಾರು ಮೂರು ಕಿಲೋ ಮೀಟರ್ ದೂರ ಸುತ್ತುವುದನ್ನು ತಡೆಯಲಿರುವ ಲಿಂಕ್ ರಸ್ತೆ ಮಾಡಿಕೊಡಲು ಪ್ರಾಧಿಕಾರ ಮಾತ್ರ ಇನ್ನೂ ಮನಸ್ಸು ಮಾಡಿಲ್ಲ ಎಂದು ದೂರುತ್ತಾರೆ ಸಂಘದ ಅಧ್ಯಕ್ಷ ಮಂಜು ಬಡಿಗೇರ.
ಬಾರಾಕೊಟ್ರಿ ಅಂಡರ್ಪಾಸ್ನ ಬಲಬದಿಯಿಂದ ನಿಂತು ನೋಡಿದರೆ ಸಿದ್ಧಾರೂಢ ಕಾಲೊನಿ ಕಾಣಿಸುತ್ತದೆ. ಅಲ್ಲದೇ, ವಿಶ್ವಭಾರತಿ ಕಾಲೊನಿ, ಚನ್ನಬಸವೇಶ್ವರ ನಗರ ಮತ್ತು ಮಂಜುನಾಥ ಕಾಲೊನಿಯ ಜನರಿಗೂ ಇದರಿಂದ ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಜನ ಹೋರಾಟಕ್ಕೆ ಮಣಿದಿರುವ ಮಹಾನಗರ ಪಾಲಿಕೆಯು, ಈಗಾಗಲೇ ಇಲ್ಲಿ ಅಕ್ರಮವಾಗಿ ಮನೆಕಟ್ಟಿಕೊಳ್ಳಲು ಮುಂದಾದವರಿಗೆ ನೋಟಿಸ್ ಜಾರಿಗೊಳಿಸಿ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿದೆ.
ಸುಮಾರು 100 ಮೀಟರ್ ರಸ್ತೆಯನ್ನು ನಿರ್ಮಾಣ ಮಾಡಿದರೂ ಸಾಕು ಈ ಭಾಗದ ನಾಗರಿಕರು, ಮಕ್ಕಳು, ಮಹಿಳೆಯರು ಕಲ್ಯಾಣ ನಗರ, ಬಾರಾಕೊಟ್ರಿ ಹಾಗೂ ನವೋದಯ ನಗರದತ್ತ ತೆರಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಉಪಾಧ್ಯಕ್ಷ, ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ವಿ.ಕೆ.ಪರ್ವತಿ.
ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಹುಡಾ ಆಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.