ಕೆಂಭಾವಿ: ಕುಡಿಯುವ ನೀರಲ್ಲಿ ಹೆಚ್ಚು ಫ್ಲೋರೈಡ್ ಹಾಗೂ ನೈಟ್ರೇಟ್ ರಾಸಾಯನಿಕಗಳಿದ್ದರೆ ಈ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ. ವಿವಿಧ ರೋಗದ ಲಕ್ಷಣಗಳು ಏವೂರು ತಾಂಡಾದ ಜನರಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಈ ಬಗ್ಗೆ ಹೆಚ್ಚಿನ ಅಧ್ಯಯನ ಸಡೆಸಬೇಕು ಎಂದು ಬೆಂಗಳೂರಿನ ವೈದ್ಯ ಡಾ. ಡಿ.ಉಮೇಶ ತಿಳಿಸಿದರು.
ಫ್ಲೋರೈಡ್ ಹಾಗೂ ನೈಟ್ರೇಟ್ಯುಕ್ತ ನೀರು ಸೇವನೆಯಿಂದ ಏವೂರ ತಾಂಡಾ (ಸೇವಾನಗರ) ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಗುರುವಾರ ವೈದ್ಯರ ತಂಡದೊಂದಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಏವೂರ ತಾಂಡಾದಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಫ್ಲೋರೈಡ್ ಹಾಗೂ ನೈಟ್ರೇಟ್ ರಾಸಾಯನಿಕ ವಸ್ತುಗಳಿದ್ದು ಈ ನೀರು ಸೇವಿಸಿದ ಜನರು ಬುದ್ಧಿಮಾಂದ್ಯ, ನರದೌರ್ಬಲ್ಯ, ಮೂಳೆಗಳ ದೌರ್ಬಲ್ಯದಂತಹ ಜ್ವಲಂತ ಸಮಸ್ಯೆ ಎದುರಿಸುವಂತಾಗಿದೆ ಎಂದು ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ರಾಮು ನಾಯಕ ಹೇಳಿದರು.