ದಾವಣಗೆರೆ: ಅಖಿಲ ಭಾರತ ವಿದ್ಯಾರ್ಥಿ ಅಸೋಸಿಯೇಷನ್ (ಐಸಾ) ವತಿಯಿಂದ ಕೇಂದ್ರದ ಬಜೆಟ್ನಲ್ಲಿ ವಿದ್ಯಾರ್ಥಿ ವಿರೋಧಿ ಮಸೂದೆಗಳನ್ನು ಹಿಂದೆಗೆದುಕೊಳ್ಳಲು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಮಂಗಳವಾರ ಆರಂಭವಾಯಿತು.ಬೆಳಿಗ್ಗೆ ಅಸೋಸಿಯೇಷನ್ ಕಾರ್ಯಕರ್ತರು ನಗರದ ಮಾಸಬ ಕಾಲೇಜಿನಿಂದ ಅಭಿಯಾನ ಆರಂಭಿಸಿದರು.
ವಿದೇಶಿ ಶೈಕ್ಷಣಿಕ ಸಂಸ್ಥೆಗಳ ಮಸೂದೆ- 2010, ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಮಸೂದೆ -2010 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ಮಾನ್ಯತಾ ನಿಯಂತ್ರಣ ಪ್ರಾಧಿಕಾರ ಮಸೂದೆ -2010 ಪರಿವರ್ತಕ ವಿಶ್ವವಿದ್ಯಾಲಯಗಳ ಮಸೂದೆ ಇವೆಲ್ಲವೂ ಉನ್ನತ ಶಿಕ್ಷಣದ ವಾಣಿಜ್ಯೀಕರಣ ಮತ್ತು ಖಾಸಗೀಕರಣಕ್ಕೆ ಹಾದಿ ಮಾಡುವ ತಂತ್ರಗಳೇ ಆಗಿವೆ.
ಉನ್ನತ ಶಿಕ್ಷಣ ಸಂಸ್ಥೆಗಳು ಶ್ರೀಮಂತರ ಆಶ್ರಯ ತಾಣಗಳೇ ಆಗಿವೆ. ಆದ್ದರಿಂದ ಇಂಥ ನೀತಿಗಳನ್ನು ಕೇಂದ್ರ ಸರ್ಕಾರ ಅನುಸರಿಸುವುದನ್ನು ತಡೆಯಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.ಈ ಹಿನ್ನೆಲೆಯಲ್ಲಿ ಸಂಘಟನೆಯು ಫೆ. 21ರಂದು ನವದೆಹಲಿಯಲ್ಲಿ ‘ಶಿಕ್ಷಣವನ್ನು ಕುರಿತು ಪ್ರಜಾಸಂಸತ್ತು’ ಏರ್ಪಡಿಸಿದೆ ಎಂದು ತಿಳಿಸಿದರು.ಅಭಿಯಾನದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ದೊಡ್ಡಮನಿ ಪ್ರಸಾದ್, ಜಿಲ್ಲಾ ಸಂಚಾಲಕ ಸಾತವಾಡಿ ಮಂಜುನಾಥ, ಗಣೇಶ ದೇವರಮನಿ, ಪ್ರಕಾಶ, ಪಿ.ಆರ್. ರೇಖಾ, ಆರ್. ಸುಷ್ಮಾ, ಪ್ರದೀಪ್, ಆಕಾಶ್ ಇತರರು ಭಾಗವಹಿಸಿದ್ದರು.