ನವದೆಹಲಿ (ಪಿಟಿಐ): ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದ ಪಟೌಡಿ ಅವರಿಗೆ ಕೊನೆಯವರೆಗೆ ಇದ್ದದ್ದು ಒಂದೇ ಕಣ್ಣು. ಅವರು ಮೃತರಾಗುವ ಮುನ್ನವೇ ತಮ್ಮ ಆ ಒಂದು ಕಣ್ಣನ್ನು ದಾನ ಮಾಡಿದ್ದರು.
ಕಣ್ಣು ಇಲ್ಲದಿದ್ದರೆ ಎದುರಾಗುವ ಕಷ್ಟವನ್ನು ಅರಿತಿದ್ದ `ಟೈಗರ್~ ತಮ್ಮ ಒಂದು ಅಕ್ಷಿಯೂ ವ್ಯರ್ಥವಾಗಬಾರದೆಂದು ಬಯಸ್ಸಿದ್ದರು. ಆದ್ದರಿಂದಲೇ ಕಣ್ಣು ದಾನ ಮಾಡುವ ಪ್ರಮಾಣ ಪತ್ರವನ್ನು ಬರೆದುಕೊಟ್ಟಿದ್ದರು.
ಗುರುವಾರ ಅವರು ಮೃತರಾದ ನಂತರ ಎಡಗಣ್ಣನ್ನು ಇಲ್ಲಿನ `ವೇಣು ಐ ಇನ್ಸ್ಟಿಟ್ಯೂಟ್~ಗೆ ನೀಡಲಾಯಿತು. 2001ರಿಂದ ಈಚೆಗೆ ಪಟೌಡಿ ಇದೇ ಸಂಸ್ಥೆಯ ಮೂಲಕ ನೇತೃದಾನ ಕುರಿತು ಜಾಗೃತಿ ಆದೋಲನ ನಡೆಸುತ್ತಾ ಬಂದಿದ್ದರು.
ಈ ಸಂಸ್ಥೆಯಿಂದ ಪಟೌಡಿ ನಗರದಲ್ಲಿ ಪ್ರತಿ ತಿಂಗಳು ನೇತೃ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗುತ್ತಿತ್ತು. 1991ರಿಂದ ಇಲ್ಲಿಯವರೆಗೆ ಸುಮಾರು 500 ಜನರಿಗೆ ದೃಷ್ಟಿ ಸಿಕ್ಕಿದೆ.