ಬೆಂಗಳೂರು: ರಾಷ್ಟ್ರದ ಒಂಬತ್ತು ತಂಡಗಳು ಬೆಂಗಳೂರಿನಲ್ಲಿ ಫೆಬ್ರುವರಿ 20ರಿಂದ 24ರ ವರೆಗೆ ನಡೆಯಲಿರುವ ಹನ್ನೊಂದನೇ ಅಖಿಲ ಭಾರತ ಬಿಎಸ್ಎನ್ಎಲ್ ವಾಲಿಬಾಲ್ ಟೂರ್ನಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಈ ಟೂರ್ನಿಯ ಪಂದ್ಯಗಳು ಲೀಗ್ ಮತ್ತು ಸೂಪರ್ ಲೀಗ್ ಮಾದರಿಯಲ್ಲಿ ನಡೆಯಲಿವೆ. ಆತಿಥೇಯ ಕರ್ನಾಟಕ ಸೇರಿದಂತೆ ಬಿಹಾರ, ಕೇರಳ, ದೆಹಲಿ ಎಂಟಿಎನ್ಎಲ್, ಉತ್ತರಖಂಡ, ತಮಿಳುನಾಡು, ಹಿಮಾಚಲ ಪ್ರದೇಶ, ಮುಂಬೈ ಎಂಟಿಎನ್ಎಲ್ ಹಾಗೂ ರಾಜಾಸ್ತಾನ ತಂಡಗಳು ಭಾಗವಹಿಸಲಿವೆ.
ಈ ವಿಷಯವನ್ನು ಬಿಎಸ್ಎನ್ಎಲ್ ಕರ್ನಾಟಕ ವಲಯದ ಸಿಜಿಎಂ ಪಿ. ರಾಘವನ್ ಹಾಗೂ ಪಿಜಿಎಂ ಶುಭೇಂದ್ರ ಘೋಷ್ ಹಾಗೂ ಕರ್ನಾಟಕ ಟೆಲಿಕಾಂ ಕ್ರೀಡಾ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಕೆ.ಬಿ. ಗಣೇಶ್ ಬಾಬು ಶುಕ್ರವಾರ ವರದಿಗಾರರಿಗೆ ತಿಳಿಸಿದರು. ಕಳೆದ ಎರಡು ಬಾರಿ ಚಾಂಪಿಯನ್ ಆಗಿದ್ದ ಆತಿಥೇಯ ಕರ್ನಾಟಕ ತಂಡದವರು ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ `ಹ್ಯಾಟ್ರಿಕ್~ ಸಾಧನೆ ಮಾಡುವ ನಿರೀಕ್ಷೆ ಇದೆ.
ಭಾನುವಾರ ಬೆಳಿಗ್ಗೆ 9-00ಕ್ಕೆ ಕರ್ನಾಟಕ ಟೆಲಿಕಾಂ ಸರ್ಕಲ್ನ ಚೀಫ್ ಜನರಲ್ ಮ್ಯಾನೇಜರ್ ಪಿ. ರಾಘವನ್ ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಎ. ಲೋಕೇಶ್ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ನಂದಕುಮಾರ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.
ಟೂರ್ನಿಯಲ್ಲಿ ಭಾಗವಹಿಸುವ ಆತಿಥೇಯ ಕರ್ನಾಟಕ ತಂಡ ಇಂತಿದೆ:
ಟಿ.ಡಿ. ರವಿಕುಮಾರ್, ಎಂ. ಗಣೇಶ್ ರೈ, ಮಹಾಬಲೇಶ್ವರ ಜಿ. ಹೆಗಡೇಕರ್, ಮಾರುತಿ ಜಿ. ನಾಯಕ್, ಎ. ಅನಿಲ್ ಬರ್ನಾಡ್, ಎಚ್.ಕೆ. ನಾಗೇಶ್, ಆರ್.ಎನ್. ಲಕ್ಷ್ಮೀಕಾಂತ, ರಾಜೇಶ್ ಕೆ. ಪವಾರ್, ಜಿ. ಅರುಣ್ ಕುಮಾರ್, ಎಸ್. ಗಿರೀಶ್ ಕುಮಾರ್, ಎಂ.ಆರ್. ಸದಾಶಿವಾರಾಧ್ಯ ಹಾಗೂ ಜೆ.ವಿ. ರಮಣಕುಮಾರ್. ಕೋಚ್: ರಘುಪ್ರಸಾದ್, ಮ್ಯಾನೇಜರ್: ಕೆ.ಬಿ. ಗಣೇಶ್ ಬಾಬು.