ಚಾಮರಾಜನಗರ: ಜಿಲ್ಲಾ ಕೇಂದ್ರದ ಎಲ್ಲ ವಾರ್ಡ್ಗಳಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿ ನಗರದಲ್ಲಿ ಬುಧವಾರ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.
ಈಗ ಮಳೆ ಸುರಿಯುತ್ತಿದೆ. ಹಲವೆಡೆ ಒಳಚರಂಡಿ ಕಾಮಗಾರಿ ಅಪೂರ್ಣ ಗೊಂಡಿದೆ. ರಸ್ತೆಗಳು ಕೆಸರು ಗದ್ದೆಯಾಗಿದ್ದು, ಸಾರ್ವಜನಿಕರು ತಿರುಗಾಡಲು ತೊಂದರೆ ಯಾಗುತ್ತಿದೆ ಎಂದು ದೂರಿದರು.
ಸಕಾಲದಲ್ಲಿ ಒಳಚರಂಡಿ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ನಗರಸಭೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ. ವಾರ್ಡ್ ನಂ. 15ರಲ್ಲಿ ಮಾಡಿರುವ ಕಾಮಗಾರಿಯಲ್ಲಿ ರಸ್ತೆಯ ಮಣ್ಣು ತೆಗೆದಿಲ್ಲ. ಇದರಿಂದ ಶಾಲಾ ಮಕ್ಕಳು ಮತ್ತು ವಯಸ್ಸಾದವರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಕೂಡಲೇ, ಜಿಲ್ಲಾಧಿಕಾರಿ ಅವರು ಸ್ಥಳ ಪರಿಶೀಲನೆ ನಡೆಸಬೇಕು. ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಜತೆಗೆ, ಕಾಮಗಾರಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಚಾ.ಗು ನಾಗರಾಜು, ಚಾ.ನ. ಶಿವರಾಜು, ರಾಜಶೇಖರ್, ರಾಮಸಮುದ್ರ ಶಿವು, ಅರಕಲವಾಡಿ ಕಪ್ಪಣ್ಣ, ರಾಚಯ್ಯ, ಮಹದೇವಮ್ಮ, ಗೀತಾ, ಶಾಂತಿ, ಪುಟ್ಟನಂಜಮ್ಮ ಪಾಲ್ಗೊಂಡಿದ್ದರು.