ನವದೆಹಲಿ (ಐಎಎನ್ಎಸ್): ಓಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಮತ್ತು ಬಿಜೆಪಿಯ ಇಬ್ಬರು ಮಾಜಿ ಸಂಸದರನ್ನು ಮಂಗಳವಾರ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸ್ಥಳೀಯ ತೀಸ್ ಹಜಾರಿ ನ್ಯಾಯಲಯದ ವಿಶೇಷ ನ್ಯಾಯಾಧೀಶರಾದ ಸಂಗೀತಾ ದಿಂಗ್ರಾ ಸೆಹಗಲ್ ಅವರು ಅಮರ್ ಸಿಂಗ್ ಹಾಗೂ ಸಂಸದರಾದ ಫಗನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ್ ಸಿಂಗ್ ಅವರನ್ನು ಸೆಪ್ಟಂಬರ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ನ್ಯಾಯಾಲಯದಲ್ಲಿ ಹಾಜರಿದ್ದ ಕುರ್ತಾಧಾರಿ ಅಮರಸಿಂಗ್ ಅವರು ಒಂದು ಕ್ಷಣ ತೀರ್ಪು ಕೇಳಿ ಆಘಾತಕೊಳಗಾದರಲ್ಲದೇ, ಪೊಲೀಸರಿಂದ ದೂರ ನಡೆಯಲು ಪ್ರಯತ್ನಿಸಿದರು.
ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಮಾಡಿದ ನ್ಯಾಯಾಧೀಶರು ~ಅರ್ಜಿ ಪೂರ್ವಭಾವಿ ಹಂತದಲ್ಲಿದೆ. ಆದ್ದರಿಂದ ಪ್ರಾಸಿಕ್ಯೂಷನ್ ಉತ್ತರ ಸಲ್ಲಿಸಲಿ~~ ಎಂದು ಹೇಳಿದರು.
2008 ರಲ್ಲಿ ಲೋಕಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಪರ ಮತ ಹಾಕುವಂತೆ ಬಿಜೆಪಿಯ ಮೂವರು ಸಂಸದರಿಗೆ ಲಂಚ ನೀಡಲಾಗಿತ್ತು ಎಂದು ಹೇಳಲಾದ ಹಗರಣ ಇದು.
ಅಮರ್ ಸಿಂಗ್ ಅವರು ಬಿಜೆಪಿ ಸಂಸದರಿಗೆ ತಮ್ಮ ಕಾರ್ಯದರ್ಶಿ ಸಂಜೀವ ಸಕ್ಸೇನಾ ಮೂಲಕ ಒಂದು ಕೋಟಿ ರೂಪಾಯಿ ಲಂಚ ನೀಡಿರುವ ಕುರಿತು ~ಸಾಕಷ್ಟು ಪುರಾವೆಗಳಿವೆ~ಎಂದು ತನಿಖೆಯ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.