ಬೆಂಗಳೂರು: ಸರ್ಜಾಪುರ ಮುಖ್ಯರಸ್ತೆ ಸಮೀಪದಕೈಕೊಂಡನಹಳ್ಳಿಯಲ್ಲಿರುವ ‘ಎಕ್ಸೀಡ್ ಪ್ರಿಸ್ಕೂಲ್’ ಶಿಕ್ಷಣ ಸಂಸ್ಥೆಯ ವಾಹನ ಚಾಲಕ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಮಗುವಿನ ಪೋಷಕರು ಎಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಚಾಲಕ ಶ್ರೀನಿವಾಸ್ನನ್ನು (26) ಬಂಧಿಸಿದ್ದಾರೆ.
ಮಗುವಿನ ಪೋಷಕರು ಮುಂಬೈ ಮೂಲದವರಾಗಿದ್ದು, ಚಾರ್ಟರ್ಡ್ ಅಕೌಂಟೆಂಟ್ಗಳಾಗಿ (ಸಿ.ಎ) ಕೆಲಸ ಮಾಡುತ್ತಾರೆ. ಮುಂಬೈನಲ್ಲಿ ನೆಲೆಸಿರುವ ತಂದೆ ಆಗಾಗ್ಗೆ ನಗರಕ್ಕೆ ಬಂದು ಹೋಗುತ್ತಾರೆ. ತಾಯಿ, ಮಗುವಿನೊಂದಿಗೆ ದೇವರಬೀಸನಹಳ್ಳಿಯಲ್ಲಿ ವಾಸ ವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ಕೆಲಸಕ್ಕೆ ಹೋಗುವುದರಿಂದ ಮಗುವನ್ನು ಎಕ್ಸೀಡ್ ಪ್ರಿಸ್ಕೂಲ್ ಸಂಸ್ಥೆಯಲ್ಲಿ ‘ಡೇ ಕೇರ್’ಗೆ ಸೇರಿಸಿದ್ದರು. ಚಾಲಕ ಶ್ರೀನಿವಾಸ್ ಪ್ರತಿನಿತ್ಯ ಸಂಜೆ ಮಗುವನ್ನು ಶಾಲಾ ವಾಹನದಲ್ಲಿ ಮನೆಗೆ ಬಿಟ್ಟು ಹೋಗುತ್ತಿದ್ದ. ಅದೇ ರೀತಿ ಆತ ಮಂಗಳವಾರ (ಜ.7) ಸಂಜೆ ಮಗುವನ್ನು ಮನೆಗೆ ಕರೆದುಕೊಂಡು ಬರುವ ಮಾರ್ಗಮಧ್ಯೆ ವಾಹನ ನಿಲ್ಲಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ಜನನಾಂಗದ ಭಾಗದಲ್ಲಿ ಗಾಯವಾಗಿರುವುದನ್ನು ಗಮನಿಸಿದ ತಾಯಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆ ಸಂಗತಿಯನ್ನು ಗಮನಿಸಿದ ತಾಯಿ, ಮಗು ಶಾಲೆಯಲ್ಲಿ ಬಹಿರ್ದೆಸೆಗೆ ಹೋಗಿ ಬಳಿಕ ಒಳಉಡುಪನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಬಂದಿರಬಹುದೆಂದು ಭಾವಿಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದರು.
ಆದರೆ, ಸಮಯ ಕಳೆದಂತೆ ಅಳಲಾರಂಭಿಸಿದ ಮಗು ರಾತ್ರಿಯಿಡೀ ನಿದ್ರೆ ಮಾಡಿರಲಿಲ್ಲ. ಬುಧವಾರ ಬೆಳಿಗ್ಗೆ ಸಹ ಮಗು ಅದೇ ರೀತಿ ವರ್ತಿಸಿತ್ತು. ಇದರಿಂದ ಅನುಮಾನಗೊಂಡ ತಾಯಿ ಮಗುವನ್ನು ಮನೆಯ ಸಮೀಪದ ಉದ್ಯಾನಕ್ಕೆ ಕರೆದೊಯ್ದು ಮುದ್ದು ಮಾಡುತ್ತಾ ಕೇಳಿದಾಗ, ‘ಚಾಲಕ ಕೆಟ್ಟವನು, ಆತನಿಗೆ ಹೊಡೆಯಿರಿ’ ಎಂದು ಹೇಳಿತ್ತು ಎಂದು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಅತ್ಯಾಚಾರ, ಮಹಿಳೆಯ ಗೌರವಕ್ಕೆ ಧಕ್ಕೆ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಾಲಕ ಕೆಟ್ಟವನು: ಮಗು ಮಂಗಳವಾರ ಸಂಜೆ ತನ್ನ ಒಳಉಡುಪನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಮನೆಗೆ ಬಂದಿತ್ತು.
‘ಡ್ರೈವರ್ ವಾಲಾ ಅಚ್ಚಾ ನಹಿ’
‘ಡ್ರೈವರ್ ವಾಲಾ ಅಚ್ಚಾ ನಹಿ, ಉಸ್ಕೊ ಮಾರೊ’– ಆರೋಪಿ ಶ್ರೀನಿವಾಸ್ನ ಕ್ರೌರ್ಯದಿಂದ ನಲುಗಿರುವ ಮಗುವನ್ನು ಪೊಲೀಸರು ಮಾತನಾಡಿಸಿದಾಗ ಮಗು ಹೇಳಿದ ತೊದಲು ನುಡಿಗಳಿವು.
‘ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಮಗುವನ್ನು ಮಾತನಾಡಿಸಲಾಯಿತು. ಆಗ ಮಗು ಶ್ರೀನಿವಾಸ್ನ ಹೆಸರನ್ನು ಪ್ರಸ್ತಾಪಿಸದೆ ಚಾಲಕ ಒಳ್ಳೆಯವನಲ್ಲ, ಆತನಿಗೆ ಹೊಡೆಯಿರಿ ಎಂದು ಹೇಳಿತು’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಮಹಿಳಾ ಸಿಬ್ಬಂದಿ ಇದ್ದರು
‘ಶಾಲಾ ವಾಹನದ ಚಾಲಕನೊಬ್ಬ ಏಳು ತಿಂಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದ. ಆ ನಂತರ ಶ್ರೀನಿವಾಸ್ನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದೆವು. ಮಕ್ಕಳನ್ನು ಕರೆದೊಯ್ಯುವ ವಾಹನದಲ್ಲಿ ಮಹಿಳಾ ಸಿಬ್ಬಂದಿಯನ್ನು ಕಳುಹಿಸುತ್ತಿದ್ದೆವು. ಅವರ ಕಣ್ತಪ್ಪಿಸಿ ಈ ಘಟನೆ ಹೇಗೆ ನಡೆಯಿತು ಎಂಬುದು ಗೊತ್ತಿಲ್ಲ’ ಎಂದು ಶಾಲಾ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.
ಶ್ರೀನಿವಾಸ್, ಕುಟುಂಬ ಸದಸ್ಯರೊಂದಿಗೆ ದೊಡ್ಡನೆಕ್ಕುಂದಿಯಲ್ಲಿ ವಾಸವಾಗಿದ್ದ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.