ರಾಮನಗರ ಈಗಲ್ಟನ್ ರೆಸಾರ್ಟ್ ಭೂ ಒತ್ತುವರಿ ವಿಚಾರದಲ್ಲಿ ಅಮಾನತುಗೊಂಡಿರುವ ಇಬ್ಬರು ನೌಕರರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಂದಾಯ ಇಲಾಖೆ ನೌಕರರು ಮೂರು ದಿನಗಳಿಂದ ರಾಮನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇವರು ತಮ್ಮ ಪಟ್ಟು ಸಡಿಲಿಸದ ಕಾರಣ ಸಾರ್ವಜನಿಕ ಕೆಲಸಗಳು ವಿಲೇವಾರಿಯಾಗದೆ ನೆನೆಗುದಿಗೆ ಬಿದ್ದಿವೆ.
ಪ್ರತಿಭಟನಾಕಾರರು ನೌಕರರನ್ನು ಬಲವಂತವಾಗಿ ಪ್ರತಿಭಟನೆಗೆ ಕರೆದೊಯ್ಯುತ್ತಿದ್ದು, ಇದರಿಂದ ಕಂದಾಯ ಇಲಾಖೆ ಕಚೇರಿಗಳು ಭಣಗುಡುತ್ತಿವೆ.
ತಮ್ಮ ಆಸ್ತಿ ಮತ್ತಿತರ ದಾಖಾಲಾತಿಗಳು, ಕಾಗದ ಪತ್ರಗಳಿಗಾಗಿ ದೂರದೂರುಗಳಿಂದ ಆಗಮಿಸುತ್ತಿರುವ ಸಾರ್ವಜನಿಕರನ್ನು ಖಾಲಿ ಕುರ್ಚಿ ಟೇಬಲ್ಗಳು ಸ್ವಾಗತಿಸುತ್ತಿದ್ದು, ಸಾರ್ವಜನಿಕರ ಕೋಪ ಮೇರೆ ಮೀರುತ್ತಿದೆ. ಈಗ ಬರಬಹುದು, ಆಗ ಬರಬಹುದು ಎಂದು ಸಾರ್ವಜನಿಕರು ಕಾಯುತ್ತಾ ಕುಳಿತಿರುವ ದೃಶ್ಯ ಸಾಮಾನ್ಯವಾಗಿದ್ದು, ತಹಸೀಲ್ದಾರ್ ಮೇಲೆ ಹರಿಹಾಯುವ ಘಟನೆಗಳು ನಡೆಯುತ್ತಿವೆ.