ರಾಜರಾಜೇಶ್ವರಿನಗರ: ಹೇರೋಹಳ್ಳಿ ಕಂದಾಯ ವಿಭಾಗ ಸೇರಿದಂತೆ ಐದು ವಾರ್ಡ್ಗಳಲ್ಲಿ ನಡೆದಿರುವ ಭಾರಿ ಅಕ್ರಮಗಳನ್ನು ಬಯಲಿಗೆ ಎಳೆಯಲು ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಬಿಎಂಪಿಗೆ ಸೇರ್ಪಡೆಯಾದ ನಗರಸಭೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ನಡೆದಿದೆ. ವಿಶೇಷ ಲೆಕ್ಕ ಪರಿಶೋಧನೆ ಮಾಡಿ, ಅಗತ್ಯವಿದ್ದರೆ ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದ ಅವರು ಹೇರೋಹಳ್ಳಿ ಸೇರಿದಂತೆ ಕೆಲವು ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ಸಿ.ಸಿ.ಟಿ.ವಿ ಅಳವಡಿಸಲು ಆಯುಕ್ತರಿಗೆ ಸೂಚಿಸಿದರು.
ಅಕ್ರಮ ಸಕ್ರಮಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು ಶೀಘ್ರ ಜಾರಿಗೆ ಬರಲಿದೆ. ಇದರಿಂದ ಸಂಗ್ರಹಗೊಳ್ಳುವ ಸಾವಿರಾರು ಕೋಟಿ ತೆರಿಗೆಯಿಂದ ನಗರದ ಅಭಿವೃದ್ದಿ ಮಾಡಲು ಸಾಧ್ಯ ಎಂದು ಹೇಳಿದರು. ರಾಜರಾಜೇಶ್ವರಿನಗರ ವಲಯದಲ್ಲಿ ಗರಿಷ್ಠ ₨ 200ಕೋಟಿ ತೆರಿಗೆ ಬರಬೇಕು. ಕೇವಲ ₨ 95 ಕೋಟಿ ಗುರಿಯನಟ್ಟುಕೊಂಡಿರುವುದು ಗಮನಿಸಿದರೆ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಆಯುಕ್ತ ಎಂ. ಲಕ್ಷ್ಮೀನಾರಾಯಣ ಮಾತನಾಡಿ ಸಚ್ಚಿದಾನಂದ ಬಡಾವಣೆ ನಿವಾಸಿಗಳಿಗೆ ಹೈಕೋರ್ಟ್ ಆದೇಶದಂತೆ ಖಾತೆ ಮತ್ತು ನಕ್ಷೆ ನೀಡುವುದರ ಜತೆಗೆ ಬಂಗಾರಪ್ಪ ನಗರ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಭರವಸೆ ನೀಡಿದರು.