ರಾಮದುರ್ಗ: ಡಾ. ಚಂದ್ರಶೇಖರ ಕಂಬಾರರು ಸಿರಿಸಂಪಿಗೆ ಚಿತ್ರದ ಮೂಲಕ ಆಧುನಿಕ ಕನ್ನಡಕ್ಕೆ ಜಾನಪದ ಕೊಡುಗೆಯನ್ನು ನೀಡಿದ್ದಾರೆ ಎಂದು ಧಾರವಾಡದ ಎಸ್ಡಿಎಂ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಡಾ. ಎಚ್. ಎ. ಪಾರ್ಶ್ವನಾಥ ಹೇಳಿದರು.
ಭಾನುವಾರ ಇಲ್ಲಿನ ಪ್ರಗತಿ ವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ `ಜ್ಞಾನಪೀಠ ಪ್ರಶಸ್ತಿ ಆಯ್ಕೆಯಾದ ಸಾಹಿತಿ ಡಾ. ಚಂದ್ರಶೇಖರ ಕಂಬಾರ~ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕಂಬಾರ ಅವರ ಜೋಕುಮಾರಸ್ವಾಮಿ ನಾಟಕಗಳು ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿವೆ ಎಂದರು.
ಕಂಬಾರರು ಕಾಡುಗಳ್ಳ ವೀರಪ್ಪನ್ ಕುರಿತು ನಾಟಕ ಬರೆಯುವ ಬಯಕೆಯನ್ನು ವ್ಯಕ್ತ ಪಡಿಸಿದ್ದಾರೆ ಎಂದರು. ಕನ್ನಡದ ಕಲ್ಪವೃಕ್ಷಗಳು- ನಾಟಕಗಳನ್ನು ನೀಡಿದ್ದಾರೆ. ಅವರ ನಾಟಕಗಳಲ್ಲಿ ಸಂಗೀತ ಜಾನಪದ ಎಲ್ಲವೂಗಳು ಸೇರಿರುತ್ತವೆ ಎಂದರು.
ಗಣ್ಯ ವರ್ತಕ ಮಹಾದೇವಪ್ಪ ಕಲಹಾಳ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ನಾಗಕಲಾಲ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ. ಐ. ಇಳಿಗೇರ, ಎಸ್. ಬಿ. ಹಳ್ಳಿ, ಚನ್ನಪ್ಪ ಮಾದರ ಇದ್ದರು. ರಾಜಶೇಖರ ಶೆಲವಡಿ ಸ್ವಾಗತಿಸಿದರು. ಸುರೇಶ ಹುಚ್ಚನ್ನವರ ನಿರೂಪಿಸಿದರು. ಸಂಗಪ್ಪ ಪರೀಟ ವಂದಿಸಿದರು. ಮುದಾಯ ಘಟಕದವರು ಪ್ರದರ್ಶಿಸಿದ `ಬುದ್ಧ-ಪ್ರಬುದ್ಧ~ ನಾಟಕ ಪ್ರದರ್ಶನ ಪ್ರೇಕ್ಷಕರ ಮನ ಸೆಳೆಯಿತು.