ಮದ್ದೂರು: ಕಟ್ಟಡ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಪಟ್ಟಣದ ತಾಲ್ಲೂಕು ಕಚೇರಿಗೆ ಸಂಘದ ಸದಸ್ಯರು ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ಕಾರ್ಮಿಕರಿಗೆ ಕನಿಷ್ಠ 10ಸಾವಿರ ರೂ., ಪುರಸಭೆ ವ್ಯಾಪ್ತಿಯ ಕಾರ್ಮಿಕರಿಗೆ ಕನಿಷ್ಠ 5,500 ರೂಪಾಯಿ ವೇತನ ನಿಗದಿಗೊಳಿಸಬೇಕು. ನಿವೃತ್ತಿ ವೇತನ, ವೈದ್ಯಕೀಯ ಸವಲತ್ತು ಸೇರಿದಂತೆ ಸರ್ಕಾರಿ ನೌಕರರಿಗೆ ದೊರಕುತ್ತಿರುವ ಎಲ್ಲಾ ಸವಲತ್ತುಗಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ರಮೇಶ್ ಮಾತನಾಡಿ, ಬೆಸಗರಹಳ್ಳಿ ತಮಿಳು ಕಾಲೋನಿಯ ಕಾರ್ಮಿಕರ ಸ್ಥಳವನ್ನು ಸ್ಥಳೀಯ ಪ್ರಭಾವಿಗಳು ಒತ್ತುವರಿ ಮಾಡಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಅಧ್ಯಕ್ಷ ಪುಟ್ಟಸ್ವಾಮಿಚಾರಿ, ತಾಲ್ಲೂಕು ಅಧ್ಯಕ್ಷ ಪಾಪಚಾರಿ, ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾಉಪಾಧ್ಯಕ್ಷ ರಾಜು, ಜಿಲ್ಲಾ ಸಮಿತಿ ಸದಸ್ಯರಾದ ಬಾಬು, ಅಶ್ವಥಚಾರಿ, ಸವತಿಮುತ್ತು, ವಾನಿ, ಗೋಪಾಲ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.