ಉಳ್ಳಾಲ: ಕಡಲ್ಕೊರೆತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ತುರ್ತು ಕ್ರಮ ಕೈಗೊಳ್ಳಲಾಗುವುದೆು ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.
ಅವರು ಉಳ್ಳಾಲದ ಕಡಲ್ಕೊರೆತ ಪ್ರದೇಶಕ್ಕೆ ಸಹಾಯಕ ಜಿಲ್ಲಾಧಿಕಾರಿ ಪ್ರಭುಲಿಂಗ ಕಾವಳಿಕಟ್ಟೆ ಮತ್ತು ಬಂದರು ಅಧಿಕಾರಿಗಳೊಂದಿಗೆ ಉಳ್ಳಾಲದ ಕಡಲ್ಕೊರೆತ ಪ್ರದೇಶಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದರು.
ಅಧಿಕಾರಿಗಳೊಂದಿಗೆ ಅಧ್ಯಯನ ನಡೆಸಿ ಉಳ್ಳಾಲದ ಹಿಲೇರಿಯಾನಗರ, ಕೈಕೊ, ಮೊಗವೀರಪಟ್ಣ, ಕೋಟೆಪುರಗಳಲ್ಲಿ ಕೆಲವೊಂದು ಅಪಾಯಕಾರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ತುರ್ತು ರಕ್ಷಣಾ ಕಾಮಗಾರಿಗೆ ಬೇಕಾದ ಅನುದಾನ ಮಂಜೂರಾತಿಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಬಿಡುಗಡೆಗೆ ಪ್ರಯತ್ನಿಸುತ್ತೇನೆ ಎಂದರು.
ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಪ್ಪಿಗೆ ನೀಡಿದ್ದು, ಟೆಂಡರ್ ವಿಳಂಬದಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದರು.ಬಂದರು ಇಲಾಖಾ ಅಧಿಕಾರಿ ಮೋಹನ್ ಕುದ್ರಿ, ಎಂಜಿನಿಯರ್ ಸುಜನ್, ಉಳ್ಳಾಲ ಪುರಸಭೆ ಅಧ್ಯಕ್ಷ ಬಾಝಿಲ್ ಡಿಸೋಜಾ ಇತರರು ಇದ್ದರು.