ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮ ಇನ್ನೆಷ್ಟು ದಿನ?

Last Updated 29 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಣವ್ ಮುಖರ್ಜಿ ಮತ್ತು ಚಿದಂಬರಂ ಗುರುವಾರ ಸಂಜೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ `ಚುಟುಕು ಹೇಳಿಕೆ~ ನೀಡುವುದರೊಂದಿಗೆ ಹಣಕಾಸು ಸಚಿವಾಲಯದ ಮಾರ್ಚ್ 25ರ ಟಿಪ್ಪಣಿ ಎಬ್ಬಿಸಿದ್ದ ರಾಜಕೀಯ ಬಿಸಿಯನ್ನು ತಣ್ಣಗಾಗಿಸುವ ಯತ್ನ ನಡೆದಿದೆ. ಆ ಮೂಲಕ ಮೇಲ್ನೋಟಕ್ಕೆ ಯುಪಿಎ ಸರ್ಕಾರದ ಇಬ್ಬರು ಪ್ರಭಾವಿ ಹಾಗೂ ಹಿರಿಯ ಸಚಿವರ ಮುಸುಕಿನ ಗುದ್ದಾಟಕ್ಕೆ ತೆರೆಬಿದ್ದಿದೆ.

`2 ಜಿ ತರಂಗಾಂತರ ಹಂಚಿಕೆ ಸಂಬಂಧ ವಿವಿಧ ಇಲಾಖೆಗಳು ನೀಡಿದ್ದ ಮಾಹಿತಿ ಆಧರಿಸಿ ಟಿಪ್ಪಣಿ ಸಿದ್ಧಪಡಿಸಲಾಗಿತ್ತು. ಅದರಲ್ಲಿ ವಾಸ್ತವಾಂಶಗಳ ಜತೆಗೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಪ್ರತಿಬಿಂಬಿಸದ ಕೆಲವು ಅಭಿಪ್ರಾಯ ಹಾಗೂ ವಿವರಣೆಗಳು~ ಇವೆ ಎಂದು ಪ್ರಣವ್ ಹೇಳಿಕೆ ಓದಿದರು.

`ಸರ್ಕಾರದ ವಿವಿಧ ಪ್ರತಿನಿಧಿಗಳ ಬಳಕೆಗೆ ಅನುಕೂಲವಾಗುವಂತೆ ವಾಸ್ತವಗಳನ್ನು ಆಧರಿಸಿ ಸಮತೋಲನದಿಂದ ಕೂಡಿದ ಟಿಪ್ಪಣಿ ಸಿದ್ಧಪಡಿಸಬೇಕೆಂದು ಆ ಮುನ್ನ ನಿರ್ಧಾರವಾಗಿತ್ತು. ಅದರ ಅನುಸಾರ ವಿವಿಧ ಸಚಿವಾಲಯಗಳಿಗೆ ಸೇರಿದ ಕೆಲವು ಅಧಿಕಾರಿಗಳು ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಮಾರ್ಚ್ 25ರಂದು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು~ ಎಂದು ಪ್ರಣವ್ ವಿವರಿಸಿದರು.

`2003ರ ಅಕ್ಟೋಬರ್‌ನಲ್ಲಿ ಎನ್‌ಡಿಎ  ಅನುಸರಿಸಿದ್ದ ನೀತಿಯನ್ನೇ 2007- 08ರಲ್ಲಿ ನಮ್ಮ ಸರ್ಕಾರ ಮುಂದುವರಿಸಿತ್ತು. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೂಡ ಅದನ್ನು ಅನುಮೋದಿಸಿತ್ತು~ ಎಂದು ಹೇಳಲು ಪ್ರಣವ್ ಮರೆಯಲಿಲ್ಲ.

ಪ್ರಣವ್ ಹೇಳಿಕೆ: ಬಿಜೆಪಿ ಟೀಕೆ

ನವದೆಹಲಿ (ಐಎಎನ್‌ಎಸ್): 2 ಜಿ ತರಂಗಾಂತರ ಹಂಚಿಕೆ ಕುರಿತು ತಮ್ಮ ಸಚಿವಾಲಯ ಕಳುಹಿಸಿದ್ದ ಟಿಪ್ಪಣಿ ವೈಯಕ್ತಿಕ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂಬ ಪ್ರಣವ್ ಹೇಳಿಕೆ ಅಸಮರ್ಥನೀಯ ಎಂದು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ.

ಹಣ ಲೂಟಿಯಾದ ಬಗ್ಗೆ ಪ್ರಣವ್ ಪ್ರಸ್ತಾಪಿಸಲೇಬೇಕಿತ್ತು. ಆದರೆ ಸಚಿವರು ಆ ಬಗ್ಗೆ ಏನನ್ನೂ ಹೇಳಿಲ್ಲ. ಇದು ಪ್ರಣವ್ ಮತ್ತು ಚಿದಂಬರಂ ನಡುವಿನ ಪ್ರತಿಷ್ಠೆಯ ಸಮರ ಎಂದು ಟೀಕಿಸಿದೆ.

ಣವ್  ಹೇಳಿಕೆಯನ್ನು ರಾಷ್ಟ್ರದ ಜನತೆ ಒಪ್ಪುವುದಿಲ್ಲ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಈ ಹೇಳಿಕೆ ಬಿಕ್ಕಟ್ಟನ್ನು ಇನ್ನಷ್ಟು ತೀವ್ರವಾಗಿಸಿದೆ. ಸರ್ಕಾರದ ಸಾಚಾತನ ರಾಷ್ಟ್ರದ ಜನತೆಯ ಮುಂದೆ ಬಹಿರಂಗಗೊಂಡಿದೆ ಎಂದು ಟೀಕಿಸಿದ್ದಾರೆ.

ಎನ್‌ಡಿಎ ಆಡಳಿತದಲ್ಲಿದ್ದ ತರಂಗಾಂತರ ಹಂಚಿಕೆ ನೀತಿಯನ್ನೇ ಯುಪಿಎ ಸರ್ಕಾರ ಮುಂದುವರಿಸಿತು ಎಂದಿರುವ  ಸಚಿವರ ಹೇಳಿಕೆ ಆಧಾರರಹಿತ ಎಂದಿದ್ದಾರೆ.


ಪ್ರಣವ್ ಹೇಳಿಕೆ ನೀಡುತ್ತಿದ್ದಂತೆ ಒಂದು ವಾರದಿಂದ ಕಳೆಗುಂದಿದ್ದ ಚಿದಂಬರಂ ನಗೆ ತುಳುಕಿಸಿಕೊಂಡು ಅದನ್ನು ಅನುಮೋದಿಸಿದರು. `ನನ್ನ ಹಿರಿಯ ಸಹೋದ್ಯೋಗಿ ಓದಿದ ಹೇಳಿಕೆಯಿಂದ ತುಂಬಾ ಸಂತಸವಾಗಿದೆ. ಈ ಹೇಳಿಕೆ ನನಗೆ ಒಪ್ಪಿಗೆಯಾಗಿದೆ. ನಮ್ಮ ಸರ್ಕಾರದಲ್ಲಿ ಭಾಗಿಯಾಗಿರುವ ಎಲ್ಲರ ದೃಷ್ಟಿಯಿಂದ ಈ ವಿಷಯ ಇನ್ನು ಮುಗಿದ ಅಧ್ಯಾಯ~ ಎಂದರು.

ಮುಖರ್ಜಿ ಮತ್ತು ಚಿದಂಬರಂ, ಪ್ರಧಾನಿ ಮನಮೋಹನ್ ಅವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಕರೆದಿದ್ದ ಈ ಗೋಷ್ಠಿಯಲ್ಲಿ ಸಚಿವರಾದ ಕಪಿಲ್ ಸಿಬಲ್ ಮತ್ತು ಸಲ್ಮಾನ್ ಖುರ್ಷಿದ್ ಅವರೂ ಇದ್ದರು. ಸುದ್ದಿಗೋಷ್ಠಿ ನಂತರ ಸೋನಿಯಾ ಅವರು ಪ್ರಧಾನಿ ಮನೆಗೆ ತೆರಳಿ 30 ನಿಮಿಷ ಮಾತುಕತೆ ನಡೆಸಿದರು.

ಇಬ್ಬರು ಸಚಿವರು ಘೋಷಿಸಿದ `ಕದನ ವಿರಾಮ~ದ ಬಗ್ಗೆ ಇಬ್ಬರೂ ಮುಖಂಡರು ಚರ್ಚಿಸಿದರು ಎನ್ನಲಾಗಿದೆ.
ಈ `ಕದನ ವಿರಾಮ~ ಘೋಷಣೆ ಮುನ್ನ ರಾಜಧಾನಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು.
ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಬೆಳಿಗ್ಗೆ ಸ್ಪೀಕರ್ ಮೀರಾ ಕುಮಾರ್ ಅವರನ್ನು ಭೇಟಿಯಾಗಿ 40 ನಿಮಿಷ ಕಾಲ ಚರ್ಚಿಸಿದ್ದರು. ಅದಾದ ನಂತರ ತಮ್ಮ ನಿವಾಸದಲ್ಲಿ ರಕ್ಷಣಾ ಸಚಿವ ಎ.ಕೆ.ಆಂಟನಿ ಮತ್ತು ತಮ್ಮ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಜತೆ ಮಾತುಕತೆ ನಡೆಸಿದ್ದರು. ಇದಾದ ಮೇಲೆ ಸೋನಿಯಾ ಮತ್ತು ಪ್ರಣವ್ ನಡುವೆ ಕೂಡ ಚರ್ಚೆ ನಡೆದಿತ್ತು.

ಸುದ್ದಿಗೋಷ್ಠಿ ನಡೆಸಲು ಪ್ರಣವ್ ಮತ್ತು ಚಿದಂಬರಂ ಒಟ್ಟಿಗೇ ಹೊರಟರು. ಆದರೆ ಮಧ್ಯದಲ್ಲಿ ಚಿದಂಬರಂ ತಮ್ಮ ನಡಿಗೆ ನಿಧಾನಗೊಳಿಸಿ ಪ್ರಣವ್‌ರೊಂದಿಗೆ `ಅಂತರ ಕಾಪಾಡಿಕೊಳ್ಳಲು~ ಯತ್ನಿಸಿದರು. ಆಗ ಹಿಂದಿರುಗಿ ನೋಡಿದ ಪ್ರಣವ್ ಸಹೋದ್ಯೋಗಿಯನ್ನು ಪಕ್ಕಕ್ಕೆ ಬರಲು ಕೋರಿದ ಘಟನೆ ನಡೆಯಿತು.

ತಮ್ಮ ಆರು ದಶಕಗಳ ರಾಜಕೀಯ ಜೀವನದಲ್ಲಿ ಪ್ರಣವ್ ಆಡಿದ್ದ ಮಾತನ್ನು ಹಿಂಪಡೆದು ಇಂತಹ ಮುಜುಗರಕ್ಕೆ ಒಳಗಾಗಿರುವುದು ಇದೇ ಮೊದಲು; ಜತೆಗೆ, ಈ ವಿವಾದಕ್ಕೆ ತಾವೇ ಕಾರಣವೆಂದು ಹೇಳಲಾಗುತ್ತಿರುವ ಬಗ್ಗೆ ಅವರು ಒಳಗೊಳಗೇ ಕೋಪಗೊಂಡಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಗುರುವಾರ ತಾವು ನೀಡಿದ ಹೇಳಿಕೆ, ಪ್ರಧಾನಿ ಮತ್ತು ಸೋನಿಯಾ ಅವರಿಗೆ ಬುಧವಾರ ಬರೆದ ಪತ್ರಗಳಲ್ಲಿ ಇದನ್ನು ಸೂಕ್ಷ್ಮವಾಗಿ ಅವರು ಹೊರಗೆಡವಿದ್ದಾರೆ.

`ಪ್ರಧಾನಿ ಕಾರ್ಯಾಲಯ ಮತ್ತು ಆಗಿನ ಸಂಪುಟ ಕಾರ್ಯದರ್ಶಿ  ಒಪ್ಪಿಗೆಯೂ ಇದಕ್ಕೆ ಇತ್ತು~ ಎಂಬುದನ್ನೂ ಗಮನಕ್ಕೆ ತಂದಿದ್ದಾರೆ.

ತಾವು ಕಳುಹಿಸಿದ್ದ ಟಿಪ್ಪಣಿಯಲ್ಲಿ ಚಿದಂಬರಂ ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂಬ ಭಾವನೆ ಮೂಡಿಸುವ ಯಾವ ಅಂಶವೂ ಇಲ್ಲ. `ವ್ಯಾಜ್ಯಗಳು ಎದುರಾಗಬಹುದೆಂಬ ಹೆದರಿಕೆ ಚಿದಂಬರಂ ತರಂಗಾಂತರ ಹರಾಜಿಗೆ ಪಟ್ಟು ಹಿಡಿಯದಿರಲು ಕಾರಣವಿರಬಹುದು~ ಎಂದೇ ಅಭಿಪ್ರಾಯಪಡಲಾಗಿದೆ ಎಂಬುದನ್ನು ಸೋನಿಯಾ ಮತ್ತು ಮನಮೋಹನ್ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT