ಹೊಳೆನರಸೀಪುರ: ಕನಕದಾಸರ ಪದಗಳು ಭೂಮಿ ಇರುವ ವರೆಗೂ ಪ್ರಸ್ತುತ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಭಾನುವಾರ ತಾಲ್ಲೂಕು ಆಡಳಿತ ಹಾಗೂ ಕುರುಬರ ಸಂಘದ ಸಹಯೋ ಗದಲ್ಲಿ ಆಯೋಜಿಸಿದ್ದ 525ನೇ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ವರ್ಗದವರಿಗೂ ಸಮಾನತೆ ಕಲ್ಪಿಸಿ ಸಾಮಾಜಿಕ ನ್ಯಾಯ ಕ್ಕಾಗಿ ಶ್ರಮಿಸಿದ ಕನಕದಾಸರು ಶ್ರೇಷ್ಠರು. ಅವರ ಕನಸಿನ ಸಮಾಜ ಇನ್ನೂ ನಿರ್ಮಾಣವಾಗಿಲ್ಲ ಎಂದರು.
ಅರಕಲಗೂಡು ಶಾಸಕ ಎ. ಮಂಜು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದ ಫಲವಾಗಿ ಎಲ್ಲ ವರ್ಗದ ಜನರಿಗೆ ಮೀಸಲಾತಿ ದೊರೆತಿದೆ. ಕೆಲವು ನಾಯಕರು ನಮ್ಮಿಂದ ಮೀಸಲಾತಿ ದೊರೆಯಿತು ಎಂದು ಬೊಗಳೆ ಬಿಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕಿ ಅನುಪಮಾ ಮಾತನಾಡಿದರು. ವಿವಿಧ ಕಲಾ ತಂಡಗಳ ಮೆರವಣಿಗೆ ನಡೆಯಿತು. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿದರು. ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಮಾಳಿಗೇಗೌಡ, ಕಾರ್ಯದರ್ಶಿ ಎಂ.ವಿ.ದಾಶರಥಿ, ತಹಶೀಲ್ದಾರ್ ಕೆ.ಪಿ. ಈಶ್ವರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಮಾಜಿ ಅಧ್ಯಕ್ಷ ಎ.ಡಿ. ಚಂದ್ರಶೇಖರ್, ಸದಸ್ಯರಾದ ಕುಸುಮಾ, ಗೀತಾ, ಯಶೋದಮ್ಮ, ಪುರಸಭಾಧ್ಯಕ್ಷೆ ವಿನೋದ, ಕೆಪಿಸಿಸಿ ಸದಸ್ಯ ಪುಟ್ಟೇಗೌಡ ಇದ್ದರು.