ಹಳೇಬೀಡು: `ಗೋಬರ್ ಗ್ಯಾಸ್ನಿಂದ ಇಂಧನ ಮಾತ್ರವಲ್ಲದೆ ಭೂಮಿಯ ಫಲವತ್ತತೆಗೆ ಬೇಕಾದ ಗುಣಮಟ್ಟದ ಸಗಣಿ ತಿಳಿ ದೊರಕುತ್ತದೆ. ಬಡ ರೈತರು ಗೋಬರ್ ಗ್ಯಾಸ್ ಸ್ಥಾಪಿಸಲು ಅನುಕೂಲವಾಗುವಂತೆ ಕನಿಷ್ಠ ಬಂಡವಾಳದ ಗೋಬರ್ ಗ್ಯಾಸ್ ಸ್ಥಾವರದ ಆವಿಷ್ಕಾರ ಮಾಡಲಾಗಿದೆ~ ಎಂದು ಪುಷ್ಪಗಿರಿ ಸಾವಯವ ಬಳಗದ ಸಿದ್ದರಾಮೇಶ್ ತಿಳಿಸಿದರು.
ಸಿದ್ದಾಪುರದ ಮೀನಾಕ್ಷಿ ಸೋಮಶೇಖರ್ ಮನೆಯಲ್ಲಿ ಪುಷ್ಪಗಿರಿ ಸಾವಯವ ಬಳಗ ಆವಿಷ್ಕರಿಸಿ ಅಳವಡಿಸಿದ ಕನಿಷ್ಠ ಬಂಡವಾಳದ ಗೋಬರ್ ಗ್ಯಾಸ್ ಸ್ಥಾವರಕ್ಕೆ ಮಂಗಳವಾರ ಪುಷ್ಪಗಿರಿಯ ಸೋಮಶೇಖರ್ ಸ್ವಾಮೀಜಿ ಚಾಲನೆ ನೀಡಿದರು.
ತಿಪ್ಪೆ ಗೊಬ್ಬರ, ಇಲ್ಲವೆ ನೇರವಾಗಿ ಜಮೀನಿಗೆ ಹಾಕಿದ ಸಗಣಿಯಿಂದ ಸಾರ ಒಣಗಿ ಬೆಂಡಾಗುತ್ತದೆ. ಗೋಬರ್ ಗ್ಯಾಸಿನಲ್ಲಿ ಉಪಯೋಗಿಸಿ ಬಂದ ಪಚನವಾದ ಬಗ್ಗಡವನ್ನು ಜಮೀನಿಗೆ ಹಾಕುವುದರಿಂದ ಸಾರಜನಕ, ಪೊಟ್ಯಾಷ್, ರಂಜಕದ ಪ್ರಮಾಣ ಹೆಚ್ಚಾಗಿ ಭೂಮಿಯಲ್ಲಿ ಫಲವತ್ತತೆ ಹೆಚ್ಚುತ್ತದೆ. ಗೋಬರ್ ಸ್ಥಾವರದಿಂದ ಬಂದ ಸಗಣಿಯ ತಿಳಿ ಎರೆ ಗೊಬ್ಬರ ತಯಾರಿಕೆಗೂ ಅನುಕೂಲವಾಗಲಿದೆ.
ಪ್ಲಾಸ್ಟಿಕ್ ಹೊದಿಕೆಯನ್ನು ಗುಂಡಿ ತೆಗೆದು ಬಂದೋಬಸ್ತ್ ಆಗಿ ಅಳವಡಿಸಿ ಡ್ರಮ್ನಿಂದ ಸಗಣಿಯ ತಿಳಿಯನ್ನು ಹರಿಸಿದರೆ ಪೈಪ್ನಿಂದ ಅಡುಗೆ ಮನೆಗೆ ಇಂಧನ ಪೂರೈಕೆಯಾಗುತ್ತದೆ. ಈ ಸ್ಥಾವರ ರೂಪಿಸಲು ಕೇವಲ 1500 ರೂಪಾಯಿನಿಂದ 2000 ಮಾತ್ರ ವೆಚ್ಚವಾಗುತ್ತದೆ.
ಈಗಾಗಲೇ 30 ರೈತ ಕುಟುಂಬಗಳಿಗೆ ಕನಿಷ್ಠ ಬಂಡವಾಳದ ಗೋಬರ್ ಗ್ಯಾಸ್ ಸ್ಥಾವರ ಮಾಡಿಕೊಡಲಾಗಿದೆ.
ಪುಷ್ಪಗಿರಿ ಸಾವಯವ ಬಳಗದ ಸದಸ್ಯರುಗಳು ಉಪಸ್ಥಿತರಿದ್ದರು.