ಹೆಗ್ಗೋಡಿನ `ನೀನಾಸಂ~ ಸಂಸ್ಕೃತಿ ಶಿಬಿರದಲ್ಲಿ ಕಳೆದ ಬುಧವಾರ ಕನ್ನಡ ಕಾವ್ಯದಲ್ಲಿ ಸೀಮೋಲ್ಲಂಘನದ ಮಹಾಪ್ರತೀಕಗಳು ಎಂಬ ವಿಷಯ ಕುರಿತ ಮಾತುಕತೆಯಲ್ಲಿ `ಪರನಾರಿಯನ್ನು ಅಪೇಕ್ಷಿಸುವುದು ಅಪರಾಧ~ ಎಂಬ ನಿಲುವು ತಾಳಿದ್ದ ನಾಗಚಂದ್ರನ ರಾವಣ, ಸೀತೆಯನ್ನು ಕಂಡಾಕ್ಷಣ ತನ್ನ ವ್ರತವನ್ನು ಮುರಿದು ಸೀಮೋಲ್ಲಂಘನೆ ಮಾಡಿದನೆಂಬ ಮಾತು ಬಂದಾಗ,
ಯು.ಆರ್. ಅನಂತಮೂರ್ತಿಯವರು `ಕನ್ನಡದ ಪ್ರಾಚೀನ ಕವಿಗಳು ಮೀರುವಿಕೆಯನ್ನು ಆಶ್ಚರ್ಯದಿಂದ ನೋಡಿದ್ದಾರೆಯೇ ಹೊರತು ಖಂಡಿಸಲು ಹೋಗಿಲ್ಲ~ ಎಂದು ಪ್ರತಿಕ್ರಿಯೆ ನೀಡಿರುವುದು ಸಮ್ಮತವಲ್ಲ. ಯಾಕೆಂದರೆ ಇವರ ಮಾತಿಗೆ ಅಪವಾದವೆಂಬಂತೆ ಪಂಪನಲ್ಲಿ ಅನೇಕ ಪ್ರಸಂಗಗಳಿವೆ.
ಉದಾಹರಣೆಗೆ: ಪರಾಶರಮುನಿ ಯಮುನೆಯ ನಡುಗಡ್ಡೆಯಲ್ಲಿ ಮತ್ಸ್ಯಗಂಧಿಯನ್ನು ಕೂಡಿ, ವೇದವ್ಯಾಸನನ್ನು ಹುಟ್ಟಿಸಿ, ಅವಳನ್ನಲ್ಲೇ ಕೈಬಿಟ್ಟು ನದೀ ದಾಟಿದಾಗ ಪಂಪ `ದಿವ್ಯಮುನಿಗಳ್ಗೆ ಏಗೆಯ್ದ್ಡಂತೀರದೆ?~ (ಪಂಪಭಾರತ. 1-69) ಎಂದರೆ ದೊಡ್ಡವರು ಎನಿಸಿಕೊಂಡವರು ಏನು ಮಾಡಿದರೂ ನಡೆಯುತ್ತದೆಯಲ್ಲವೆ? ಎಂದು ವೈದಿಕ ಋಷಿಮುನಿಗಳ ನೀತಿಗೆಟ್ಟ ನಡತೆಯನ್ನು ಖಂಡಿಸಿದ್ದಾನೆ.
ಮತ್ತು ಇದೇ ಮತ್ಸ್ಯಗಂಧಿಯನ್ನು ನೋಡಿದ ಶಂತನು ಚಕ್ರವರ್ತಿ ಅವಳ ಕೈ ಹಿಡಿದು `ಬಾಪೋಪಂ~ ಎಂದು ಅರಮನೆಗೆ ಆಹ್ವಾನಿಸಿದಾಗ ಅವಳು ತಣ್ಣಗೆ `ಬೇಡುವಡೆ ನೀವ್ ಎಮ್ಮಯ್ಯನಂ ಬೇಡಿರೆ~ (ಪಂಪಭಾರತ. 1-70) ಎಂದು ಅವನ ಮುಖಕ್ಕೇ ಹೇಳಿಬಿಡುತ್ತಾಳೆ. ಹೀಗೆ ಪಂಪ ನಮ್ಮ ಜನಪದ ಸಂಸ್ಕೃತಿಯ ಮೌಲ್ಯಗಳ ಹಿರಿಮೆಯನ್ನು ಕೈವಾರಿಸುತ್ತ ವೈದಿಕ ಮೂಲದ ಅನೈತಿಕ ಸಂಬಂಧಗಳನ್ನು ಸಂದರ್ಭ ಒದಗಿದಾಗಲೆಲ್ಲಾ ವಿಡಂಬಿಸಿ ಬಿಡುತ್ತಾನೆ.