ಇದಲ್ಲದೆ ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸುತ್ತ ಬಂದಿರುವುದರಿಂದ, ವಿವಿಧ ರಾಜ್ಯಗಳ ಆಶೆ-ಆಕಾಂಕ್ಷೆಗಳನ್ನು, ಹಿತಾಭಿವೃದ್ಧಿಗಳನ್ನು ಸಮಾಧಾನಕರವಾಗಿ ಈಡೇರಿಸಲಾಗುತ್ತಿಲ್ಲ. ಹೀಗಾಗಿ ದೇಶದಲ್ಲಿ ಡಿ.ಎಂ.ಕೆ. ಮತ್ತು ಶಿವಸೇನೆಯಂಥಾ ಪಕ್ಷಗಳು ಹುಟ್ಟಿಕೊಂಡಿದ್ದು ತಮ್ಮಲ್ಲಿಯ ಜನರ ಅಭ್ಯುದಯವನ್ನು ತಾವು ಆರಿಸಿ ಕಳುಹಿಸಿದ ಶಾಸಕರಿಂದ ಈಡೇರಿಸಿಕೊಳ್ಳಲು ಸಮರ್ಥ ರೀತಿಯಲ್ಲಿ ಪ್ರಯತ್ನಿಸುತ್ತಲಿವೆ.
ಕನ್ನಡ ನಾಡಿನಲ್ಲಿ ಇಂದಿಗೂ ಬಗೆಹರಿಯದ ಗಡಿ ಸಮಸ್ಯೆ, ವಿದ್ಯುತ್ ಮತ್ತು ನೀರಿನ ಸಮಸ್ಯೆ ಉದ್ಯೋಗದಲ್ಲಿ ಪಕ್ಷಪಾತ ಮುಂತಾದವುಗಳು ಪೂರ್ತಿಯಾಗಿ ಬಗೆಹರಿಯಬೇಕಾದರೆ ನಮ್ಮ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಅನಿವಾರ್ಯ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ನೆಲೆಯೂರಿ ನಿಲ್ಲಲಾರದೆಂಬ ನಿರಾಶೆಯಿಂದ ಕೈಚೆಲ್ಲಿ ಕುಳಿತರೆ ಕನ್ನಡಿಗರ ಹಿತಾಸಕ್ತಿಗೆ ಉಳಿಗಾಲವಿಲ್ಲ. ನಿಸ್ವಾರ್ಥ ಮುಂದಾಳುಗಳು ತಮ್ಮ ಜಿಗುಟತನದಿಂದ ಪ್ರಾದೇಶಿಕ ಪಕ್ಷ ಕಟ್ಟಬೇಕು. ಮತ್ತು ಅದನ್ನು ಬಲಾಢ್ಯ ಪಕ್ಷವನ್ನಾಗಿ ಬೆಳೆಸಬೇಕು.