ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕನ್ನಡದ ಭಗವದ್ಗೀತೆ- ಮಂಕುತಿಮ್ಮನ ಕಗ್ಗ'

Last Updated 15 ಡಿಸೆಂಬರ್ 2012, 6:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಕನ್ನಡದ ಭಗವದ್ಗೀತೆ ಎಂದರೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗ. ಇದನ್ನು ನಂಬಿದ ಮೇಲೆ ಬದುಕಿನಲ್ಲಿ ಕೊರತೆ ಕಾಡುವುದಿಲ್ಲ' ಎಂದು ಶತಾವಧಾನಿ ಡಾ.ಆರ್. ಗಣೇಶ ಭರವಸೆ ನೀಡಿದರು.

ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆಯ ಅಂಗವಾಗಿ ರಾಮಕೃಷ್ಣ-ವಿವೇಕಾನಂದ ಆಶ್ರಮ ಹಾಗೂ ಸಾಹಿತ್ಯ ಪ್ರಕಾಶನ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ `ಮಂಕುತಿಮ್ಮನ ಕಗ್ಗ ಮತ್ತು ನಿತ್ಯ ಜೀವನದಲ್ಲಿ ಅಧ್ಯಾತ್ಮ' ಕುರಿತು ಅವರು ಉಪನ್ಯಾಸ ನೀಡಿದರು.

`ಮಂಕುತಿಮ್ಮನ ಕಗ್ಗ ಎಂಬ ಅದ್ಭುತವಾದ ಕೃತಿ ಕೊಟ್ಟರೂ ಡಿವಿಜಿಯವರು ಹೇಳುತ್ತಾರೆ- ನಾನು ಕವಿಯಲ್ಲ, ವಿಜ್ಞಾನಿಯಲ್ಲ, ಅಲೆಮಾರಿ. ನನಗೆ ತಿಳಿದಮಟ್ಟಿಗೆ ತಿಳಿದಷ್ಟು ಹೇಳಿದ್ದೇನೆ. ಕುಂದುಕೊರತೆಗಳಿವೆ ಎಂಬ ವಿನಯವನ್ನು ವ್ಯಕ್ತಪಡಿಸುತ್ತಾರೆ. ಆದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಗ್ಗದ ಕುರಿತು ಓದುತ್ತೇವೆ ಹಾಗೂ ಕೇಳುತ್ತೇವೆ. ಇದು ಕೃತಿಯ ಜೀವಂತಿಕೆ' ಎಂದು ಅವರು ತಿಳಿಸಿದರು.

`ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ವರ್ಷವಿದು. ಜೊತೆಗೆ ಡಿವಿಜಿಯವರ 125ನೇ ಜನ್ಮವರ್ಷಾಚರಣೆ ವರ್ಷವಿದು. ಅನುಭವಗಳನ್ನು ಅರ್ಥಪೂರ್ಣವಾಗಿ ಮನನ ಮಾಡಿಕೊಂಡು ಮತ್ತೆ ಮತ್ತೆ ನಿತ್ಯಜೀವನಕ್ಕೆ ಬೇಕಾದುದನ್ನು ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿ ಹೇಳಿದ್ದಾರೆ. ಕಗ್ಗದ ಮಹತ್ವವನ್ನು ಡಿವಿಜಿಯವರು ವಿಶ್ಲೇಷಿಸಿದಂತೆ ಬದುಕಿದರು. ಅದರಲ್ಲೂ ದೊಡ್ಡ ಬದುಕನ್ನು ನಡೆಸಿಕೊಂಡು ಬಂದರು. ಮಂಕ ಎಂದರೆ ಶಿವ ಹಾಗೂ ತಿಮ್ಮ ಎಂದರೆ ವಿಷ್ಣು. ಕಗ್ಗ ಎಂದರೆ ಅರ್ಥವಾಗದೇ ಇರುವುದು. ಹೀಗೆ ಶಿವ ಹಾಗೂ ವಿಷ್ಣುವಿನ ಕುರಿತು ಅರ್ಥವಾಗದೆ ಇರುವುದನ್ನು ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಹೇಳಿದ ಹೆಗ್ಗಳಿಕೆ ಡಿವಿಜಿ ಅವರದು' ಎಂದು ಅವರು ಮೆಚ್ಚುಗೆಯಾಡಿದರು.

`ಕವಿ ಗೋಪಾಲಕೃಷ್ಣ ಅಡಿಗರು ಇರುವು ದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದರು. ಹಾಗೆ ಇರುವುದನ್ನು ಬಿಟ್ಟು ಇನ್ನೇನೋ ಬೇಕು ಎನ್ನುತ್ತೇವೆ. ಹೀಗಾಗಿ ಸುಖ, ದುಃಖ, ಭಯ, ಮೋಹ ಮೊದಲಾದ ಬಂಧನಗಳನ್ನು ಮೀರಿ ಬದುಕಲಾಗದು. ಅವುಗಳನ್ನು ಮೀರಿ ಬದುಕುವುದೇ ಮೋಕ್ಷ. ಇದಕ್ಕಾಗಿ ದೇವರನ್ನು ನಂಬುತ್ತೇವೆ ಇಲ್ಲವೆ ನಂಬದಂತೆ ಇರುತ್ತೇವೆ. ಹಿರಣ್ಯಕಶ್ಯಪು ನಂಬದೇ ಇದ್ದ. ಪ್ರಹ್ಲಾದ ನಂಬಿದ್ದ. ಆದರೆ ನಾವು ಸಿಂಬಳದಲ್ಲಿ ಬಿದ್ದ ನೊಣದಂತೆ ಒದ್ದಾಡುತ್ತಲೇ ಇರುತ್ತೇವೆ' ಎಂದು ಅವರು ಹೇಳಿದರು.

`ಜಗತ್ತಿನ ಮೂಲಕ ಸಂಸ್ಕಾರ ಪಡೆಯಬೇಕು. ಜೊತೆಗೆ ಪರಮಾತ್ಮನನ್ನು ಹುಡುಕುಲ ಈ ಸೃಷ್ಟಿಯನ್ನೇ ಅವಲಂಬಿಸಬೇಕು. ತಾನು ಎನ್ನುವ ಅಹಂಕಾರ ಬಿಡಬೇಕು. ತನ್ನದು ಎನ್ನುವ ಮಮಕಾರ ಬೆಳೆಸಿಕೊಳ್ಳಬೇಕು. ಹೀಗಾದಾಗ ಪರಮಾತ್ಮನನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ' ಎಂದು ಅವರು ಸಲಹೆ ನೀಡಿದರು.

ಡಿವಿಜಿ ದೊಡ್ಡತ
ಆರ್ಥಿಕವಾಗಿ ಕಷ್ಟದಲ್ಲಿದ್ದಾಗ, ಅನಾರೋಗ್ಯ ವಾಗಿದ್ದಾಗಲೂ ಡಿವಿಜಿಯವರು ವಿನೋದ ವಾಗಿರುತ್ತಿದ್ದರು. ಸಾರ್ವಜನಿಕರು ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ಅವರಿಗೆ ಕೊಡಲು ಸಮಾರಂಭ ಏರ್ಪಡಿಸಿದ್ದರು. ಅದನ್ನು ಮುಟ್ಟದೆ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು. ಸಮಾರಂಭದ ಮರುದಿನ ಕಿರಾಣಿ ಅಂಗಡಿಗೆ ಉದ್ರಿಯಾಗಿ ಕಾಫಿ ಪುಡಿ ಕೊಡಿರೆಂದು ಚೀಟಿ ಕಳಿಸುತ್ತಾರೆ.

ಆ ಕಾಲದಲ್ಲಿ 60 ರೂಪಾಯಿಗೆ ಒಂದು ತೊಲೆ ಬಂಗಾರವಿತ್ತು. ಎರಡು ಸಾವಿರ ರೂಪಾಯಿ ಜಯನಗರದಲ್ಲಿ ಸೈಟುಗಳು ಸಿಗುತ್ತಿದ್ದವು. ಆದರೆ ಒಂದು ಲಕ್ಷ ರೂಪಾಯಿಯನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ನೀಡಿದ್ದು ಡಿವಿಜಿಯವರ ದೊಡ್ಡತನ.

ಕಾಡಿದ ಮಾತುಗಳು
ಚಟವಿಲ್ಲದ ಮನುಷ್ಯ ಚಟ್ಟದ ಮೇಲೆ ಸಿಗುತ್ತಾನೆ.

ಸಾಮಾನ್ಯರಿಗೆ ಮದುವೆ ಸಂಸ್ಕಾರ. ಅದಾಗದಿದ್ದರೆ ಲೋಕ ಕಂಟಕರಾಗುತ್ತಾರೆ

ಬದುಕಿನ ಹಗುರವಾದ ದಾರಿ ಎಂದರೆ ನಮ್ಮನ್ನು ನೋಡಿ ನಾವೇ ನಗುವುದು

ಮನೆಯಂಗಳದಲ್ಲಿ ಅರಳಿದ ಹೂವನ್ನು ಬಿಟ್ಟು, ಕಾಮನಬಿಲ್ಲಿಗೆ ಕೈ ಚಾಚುತ್ತೇವೆ

ಕಾಣದ ಮುಖಗಳಿಗೆ ಎಸ್‌ಎಂಎಸ್, ಗ್ರಿಟಿಂಗ್ ಕಳಿಸುತ್ತೇವೆ. ಕಾಣುವ ಮುಖಗಳನ್ನು ಮಾತನಾಡಿಸುವುದಿಲ್ಲ

ಫೇಸ್‌ಬುಕ್ಕಿನಲ್ಲಿ ನಾಲ್ಕು ಸಾವಿರ ಸ್ನೇಹಿತರು. ಸ್ಮಶಾನಕ್ಕೆ ಬಂದವರು ನಾಲ್ವರೇ!

ಮೋಹ ತಪ್ಪಲ್ಲ; ಒಪ್ಪಿಕೊಳ್ಳದಿರುವುದು ತಪ್ಪು.

ಕಣ್ಣಿಗೆ ಸೊಗಸಾದರೆ ತಪ್ಪಲ್ಲ; ನನಗೇ ಸಿಗಬೇಕು ಎನ್ನುವುದು ತಪ್ಪು.

ನೆಮ್ಮದಿ ಕದಡುಷ್ಟುವಷ್ಟರ ಮಟ್ಟಿಗೆ ಜಗತ್ತಿನಲ್ಲಿ ತೊಡಗಿಕೊಳ್ಳಬೇಡಿ

12.12.12ರಂದು ಹುಟ್ಟಿ ಪ್ರಸಿದ್ಧರಾಗುವುದಲ್ಲ. ಯಾವುದೇ ದಿನ ಹುಟ್ಟಿ ಪ್ರಸಿದ್ಧರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT