ಮುಂಬೈ: ಮಹಾರಾಷ್ಟ್ರ ಸಂಗೀತ, ಕಲೆ, ಸಂಸ್ಕೃತಿ -ಈ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕದ ಹಿರಿಯ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ್, ಕುಮಾರ ಗಂಧರ್ವ, ಪಂಡಿತ ಭೀಮಸೇನ ಜೋಷಿ ಈ ಮುಂತಾದವರು ಈ ನೆಲದ ಆಶ್ರಯದಲ್ಲಿ , ಔದಾರ್ಯದಲ್ಲಿ ಬೆಳಗಿದ್ದಾರೆ ಎಂದು ಹಿರಿಯ ಪತ್ರಕರ್ತ ಶಾ.ಮಂ.ಕೃಷ್ಣರಾಯ ಅವರು ಹೇಳಿದರು.
ಅವರು ಮಹಾರಾಷ್ಟ್ರದ ಸುವರ್ಣ ಮಹೋತ್ಸವದ ನಿಮಿತ್ತ ಪುಣೆಯ ಮರಾಠಿ - ಕನ್ನಡ ಸ್ನೇಹವರ್ಧನ ಕೇಂದ್ರ ಮತ್ತು ಮೈಸೂರು ಸಂಗೀತ ವಿದ್ಯಾಲಯ ಡೊಂಬಿವಲಿಯಲ್ಲಿ ಆಯೋಜಿಸಿದ ‘ಕರ್ನಾಟಕ- ಮಹಾರಾಷ್ಟ್ರ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.
ಕೃ.ಶಿ. ಹೆಗಡೆ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ದಲಿತರಾದ ಡಾ. ಯಶವಂತ್ ಅವರ ‘ಕ್ಷಣಕ್ಷಣವೂ ಬದುಕಬೇಕು’ ಜೀವನ ಕತೆಯನ್ನು ಬಿಡುಗಡೆಗೊಳಿಸಿದರು.
ಈ ಕೃತಿಯ ಮೂಲ ಲೇಖಕಿ ಮಂಗಳ ಕೇವಳೆ ಈಗಾಗಲೇ ಈ ಕೃತಿ 11 ಆವೃತ್ತಿಗಳನ್ನು ಕಂಡಿದೆ ಎಂದರು. ಮರಾಠಿ ಕನ್ನಡ ಐತಿಹಾಸಿಕ ಅನುಬಂಧ ಎಂಬ ವಿಷಯದ ಮೇಲೆ ವಿಜಯಲಕ್ಷ್ಮಿ ರೇವಣಕರ, ಡಾ. ಸುನೀತಾ ಶೆಟ್ಟಿ, ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃ.ಶಿ. ಹೆಗಡೆ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.