ಕನಕಪುರ: ದೇಶದಲ್ಲಿನ ಭ್ರಷ್ಟಾಚಾರ ಕೊನೆಗೊಳಿಸಿ, ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಹೊರ ರಾಷ್ಟ್ರಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಕಪ್ಪುಹಣವನ್ನು ವಶಪಡಿಸಿಕೊಳ್ಳುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಭಾರತ ಸ್ವಾಭಿಮಾನ ಆಂದೋಲನ ಸಮಿತಿ ಆಗ್ರಹಿಸಿದೆ.
ಈ ಕುರಿತು ಆಂದೋಲನ ಸಮಿತಿಯ ಡಿ.ಬಾಲಕೃಷ್ಣ ಆರ್ಯ ಪತ್ರಿಕಾ ಹೇಳಿಕೆ ನೀಡಿದ್ದು, ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಆಂದೋಲನ ಸಮಿತಿ ಆಶ್ರಯದಲ್ಲಿ, ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರದ ಮುಖೇನ ಕಪ್ಪುಹಣ ತರಿಸಿಕೊಳ್ಳುವ ಬಗ್ಗೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ ಪತ್ರದೊಂದಿಗೆ ರಾಮನಗರ ಜಿಲ್ಲೆಯ 13 ಸಾವಿರ ನಾಗರಿಕರ ಸಹಿಯುಳ್ಳ 686 ಪ್ರತಿಗಳನ್ನು ಮತ್ತು ಯೋಗ ಗುರು ಬಾಬಾ ರಾಮ್ದೇವ್ ಅವರ ಮನವಿ ಪತ್ರವನ್ನು ಲಗತ್ತಿಸಲಾಗಿದೆ ಎಂದು ತಿಳಿಸಿದ್ದಾರೆ.