ಮುಧೋಳ: ತಾಲ್ಲೂಕಿನ ಸೋರಗಾಂವ ಗ್ರಾಮದ ಮಾರುತೇಶ್ವರ ಹಾಗೂ ಬೀರೇಶ್ವರ ಕಾರ್ತೀಕೊತ್ಸವದ ಅಂಗವಾಗಿ ನಡೆದ ಅಂತರರಾಜ್ಯ ಮುಕ್ತ ಕಬಡ್ಡಿ ಟೂರ್ನಿಯ ಮಹಿಳಾ ವಿಭಾಗದ ಪ್ರಶಸ್ತಿ ಜಮಖಂಡಿ ತಾಲ್ಲೂಕು ಚಿಮ್ಮಡ ಗ್ರಾಮದ ಭೂಮಿಕಾ ತಂಡದ ಪಾಲಾಯಿತು.
ಫೈನಲ್ ಪಂದ್ಯದಲ್ಲಿ ಮುಂಬಯಿ ತಂಡವನ್ನು ಮೂರು ಪಾಯಿಂಟ್ಗಳಿಂದ ರೋಚಕವಾಗಿ ಸೋಲಿಸಿದ ಭೂಮಿಕಾ ತಂಡದವರು ಪ್ರಶಸ್ತಿಯೊಂದಿಗೆ ₨ 30 ಸಾವಿರ ನಗದು ಬಹುಮಾನ ಗಳಿಸಿಕೊಂಡರು.
ಪುರುಷರ ವಿಭಾಗದ ಫೈನಲ್ನಲ್ಲಿ ಕೊಲ್ಲಾಪುರದ ಆರ್ಮಿ ತಂಡದವರು ತೇರದಾಳದ ಪ್ರಭುಲಿಂಗೇಶ್ವರ ತಂಡದ ವಿರುದ್ಧ 18–20 ಅಂತರದಿಂದ ಜಯಗಳಿಸಿ ಟ್ರೋಫಿ ಹಾಗೂ ₨ 50 ಸಾವಿರ ನಗದು ಬಹುಮಾನ ಪಡೆದರು. ಪ್ರಭುಲಿಂಗೇಶ್ವರ ತಂಡಕ್ಕೆ ಟ್ರೋಫಿ ಹಾಗೂ ₨ 40 ಸಾವಿರ ನಗದು ಬಹುಮಾನ ಲಭಿಸಿತು.
ಪುರುಷರ ವಿಭಾಗದಲ್ಲಿ ಕೊಲ್ಲಾಪುರ ಆರ್ಮಿ ತಂಡದ ಸಚಿನ್ ಗುರವ ಉತ್ತಮ ಆಟಗಾರ ಪ್ರಶಸ್ತಿ ಗಳಿಸಿದರು. ರಾಜೇಶ ಭುವಾನೆ ಉತ್ತಮ ಕ್ಯಾಚರ್, ಶಾಹು ಶಡೋಲಿ ತಂಡದ ಸದಾನಂದ ಉತ್ತಮ ರೈಡರ್, ಮಹಿಳಾ ವಿಭಾಗದಲ್ಲಿ ಚಿಮ್ಮಡ ಭೂಮಿಕಾ ತಂಡದ ಹಂಕಾ ಉತ್ತಮ ಆಟಗಾರ್ತಿ, ಮುಂಬಯಿ ತಂಡದ ಶೃತಿ ಗಾಡಿ ಉತ್ತಮ ರೈಡರ್, ಬೆಂಗಳೂರು ಮಾತಾ ತಂಡದ ರಂಜಿತಾ ಉತ್ತಮ ರೈಡರ್ ಪ್ರಶಸ್ತಿ ಗಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಡಹಳ್ಳಿಯ ಅಡವಿ ಮಠದ ಚಂದ್ರಶೇಖರ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಸಿ. ಹೊನ್ನಪ್ಪ, ಮಾಜಿ ಶಾಸಕ ಸಿದ್ದು ಸವದಿ, ರೈತ ಸಂಘದ ಮುಖಂಡ ಸುಭಾಸ ಶಿರಬೂರ, ಧರೆಪ್ಪ ಸಾಂಗ್ಲೀಕರ, ಅನಂತ ಘೋರ್ಪಡೆ, ಗಿರೀಶ ಪಾಟೀಲ ಮುಂತಾದವರು ಅತಿಥಿಗಳಾಗಿದ್ದರು.