ನವದೆಹಲಿ (ಐಎಎನ್ಎಸ್): `ರಾಷ್ಟ್ರೀಯ ಸಲಹಾ ಮಂಡಳಿ (ನ್ಯಾಕ್) ಸಿದ್ಧಪಡಿಸಿರುವ ಉದ್ದೇಶಿತ ಕೋಮು ಹಿಂಸೆ ತಡೆ ಮಸೂದೆಯನ್ನು ಸರ್ಕಾರ ಕಡೆಗಣಿಸಿದೆ~ ಎಂದು ಸೋನಿಯಾ ಗಾಂಧಿ ನೇತೃತ್ವದ ಸಲಹಾ ಮಂಡಳಿ ಸದಸ್ಯ ಹರ್ಷ ಮಂಡರ್ ಹೇಳಿದ್ದಾರೆ.
`ಭಾರತದಲ್ಲಿ ಕೋಮು ಹಿಂಸೆ: ನಿರ್ಭೀತಿಯ ಅಂತ್ಯ~ ಎಂಬ ವಿಷಯ ಕುರಿತು ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರದಲ್ಲಿ ಗುರುವಾರ ಸಂಜೆ ನಡೆದ ಇಕ್ಬಾಲ್ ಅನ್ಸಾರಿ ಸ್ಮಾರಕ ಪ್ರಥಮ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕಳೆದ ತಿಂಗಳ 11ರಂದು ರಾಷ್ಟ್ರೀಯ ಭಾವೈಕ್ಯ ಮಂಡಳಿ ಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿ ಈ ಕರಡು ಮಸೂದೆಗೆ ಸಂಬಂಧಿಸಿದಂತೆ ತೀವ್ರ ವಾಗ್ದಾಳಿ ನಡೆಸಿತ್ತು. ಆದರೆ ಸರ್ಕಾರ ಇದನ್ನು ಸಮರ್ಥಿಸಿಕೊಂಡಿಲ್ಲ.
ಇದುವರೆಗೂ ಮಸೂದೆ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು. ಸರ್ಕಾರ ಸಿದ್ಧಪಡಿಸಿದ ಕರಡು ಮಸೂದೆಯನ್ನು ಕೈಬಿಟ್ಟು, ನ್ಯಾಕ್ ಕಳೆದ ವರ್ಷ ಹೊಸದಾಗಿ ಕರಡು ತಯಾರಿಸಿದೆ.
2011ರ ಕೋಮು ಹಿಂಸೆ ಹಾಗೂ ಉದ್ದೇಶಿತ ಹಿಂಸೆ ತಡೆ ಮಸೂದೆಗೆ (ನ್ಯಾಯದಾನ ಹಾಗೂ ಪರಿಹಾರ) ಸಂಬಂಧಿಸಿದಂತೆ ಜುಲೈ ತಿಂಗಳಿನಲ್ಲಿ ನ್ಯಾಕ್ ಸರ್ಕಾರಕ್ಕೆ ತನ್ನ ಶಿಫಾರಸು ಕಳುಹಿಸಿತ್ತು.
ಕೋಮು ಹಿಂಸೆಗೆ ರಾಜ್ಯದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಉದ್ದೇಶಿತ ಮಸೂದೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಯಾವುದೇ ಘಟನೆಯಲ್ಲಿ ಬಹುಸಂಖ್ಯಾತರು ಬಲಿಪಶುಗಳಾಗುವ ಬಗ್ಗೆ ಈ ಮಸೂದೆಯಲ್ಲಿ ಪ್ರಸ್ತಾಪ ಇಲ್ಲ ಎಂದೂ ಟೀಕಿಸಿತ್ತು.