ಈಗಿನ ಡಿಜಿಟಲ್ ಕ್ರಾಂತಿ ಯುಗದಲ್ಲಿ ಯುವ ಜನರೇ ದೊಡ್ಡ ಪಾಲುದಾರರು. ಮಾಹಿತಿ ತಂತ್ರ ಜ್ಞಾನದ ರಾಜಧಾನಿ ಬೆಂಗಳೂರನ್ನು ಆಡಳಿತ ಕೇಂದ್ರವನ್ನಾಗಿಸಿಕೊಂಡಿರುವ ರಾಜ್ಯ ಸರ್ಕಾರ, ಡಿಜಿಟಲ್ ಅಪರಾಧ ಎಸಗುವವರನ್ನು ಗೂಂಡಾ ಕಾಯ್ದೆ ವ್ಯಾಪ್ತಿಯೊಳಗೆ ತರಲು ಮುಂದಾಗಿದೆ.
ಇಂಥ ಕರಾಳ ಕ್ರಮ ಸರಿಯಲ್ಲ. ಗಣಿಗಾರಿಕೆಯಂಥ ಚಟುವಟಿಕೆ ಮೂಲಕ ಪರಿಸರ ಹಾಳು ಮಾಡುವವರನ್ನು ಕೂಡ ಇದೇ ಕಾಯ್ದೆಯಡಿ ತರಲಾಗಿದೆ. ಮುಂದೊಂದು ದಿನ ಡಿಜಿಟಲ್ ಅಪರಾಧವನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲೇಬೇಕಾಗುತ್ತದೆ– ಅಂಥ ಒತ್ತಡವನ್ನು ಜನರೇ ತರುತ್ತಾರೆ. ಆಗ ಜನರ ಆಕಾಂಕ್ಷೆಗೆ ಪೂರಕವಾಗಿ ಸ್ಪಂದಿಸುವ ನೆವದಲ್ಲಿ ಸರ್ಕಾರ, ಪರಿಸರ ಹಾಳು ಮಾಡುವವರನ್ನೂ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶ ಹೊಂದಿರಬಹುದೇ?