ಚೆನ್ನೈ (ಪಿಟಿಐ): ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಚಾಕಚಕ್ಯತೆಯಿಂದಾಗಿ ಕೇಂದ್ರ ಸರ್ಕಾರವು ಹಲವು ಅಡೆತಡೆಗಳನ್ನು ದಾಟುವಂತಾಯಿತು. ಇದರಿಂದ ಕೇಂದ್ರದಲ್ಲಿ ಜಾತ್ಯತೀತ ಮತ್ತು ಸ್ಥಿರ ಸರ್ಕಾರ ಸಾಧ್ಯವಾಯಿತು. ದೇಶದ ಜನತೆ ಇದನ್ನು ಗಮನಿಸುತ್ತಿದ್ದಾರೆ ಎಂದು ಡಿಎಂಕೆ ಅಧ್ಯಕ್ಷ ಕರುಣಾನಿಧಿ ಪ್ರಶಂಸಿಸಿದ್ದಾರೆ.
ಭಾನುವಾರ (ಡಿ.9) 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಅವರಿಗೆ ಶುಭ ಕೋರಿರುವ ಕರುಣಾನಿಧಿ, ಸೋನಿಯಾ ಹಲವು ಅಡ್ಡಿ ಆತಂಕಗಳನ್ನು ಜಾಣ್ಮೆಯಿಂದ ನಿವಾರಿಸಿದರು. ಕೇಂದ್ರ ಸರ್ಕಾರಕ್ಕೆ ಎದುರಾದ ಹಲವು ಕಠಿಣ ಸವಾಲುಗಳನ್ನು ಎದುರಿಸಿ ಯಶಸ್ವಿಯಾದರು ಎಂದು ಅವರು ಸೋನಿಯಾ ಕಾರ್ಯಶೈಲಿಯನ್ನು ಶ್ಲಾಘಿಸಿದ್ದಾರೆ.